ದಾವಣಗೆರೆ - ಬಾಗಲಕೋಟೆ ಉಪಚುನಾವಣೆ | ʼವಾರ್ತಾಭಾರತಿʼ - 'ಸಂಕಲ್ಪ್' ಮತದಾನೋತ್ತರ ಸಮೀಕ್ಷೆ ಹೇಳಿದ್ದೇನು? ಆಗಿದ್ದೇನು ?

ಬೆಂಗಳೂರು : ದಾವಣಗೆರೆ ದಕ್ಷಿಣ ಹಾಗು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬಗ್ಗೆ ವಾರ್ತಾಭಾರತಿ - ಸಂಕಲ್ಪ್ ಮತದಾನೋತ್ತರ ಸಮೀಕ್ಷೆಯ ಬಹುತೇಕ ಅಂಶಗಳು ಸೋಮವಾರ ಬಂದಿರುವ ಫಲಿತಾಂಶಕ್ಕೆ ಹೋಲಿಸಿದಾಗ ಸರಿಯಾಗಿರುವುದು ಕಂಡು ಬಂದಿದೆ. ಎರಡೂ ಕ್ಷೇತ್ರಗಳಲ್ಲಿ ವಿಜೇತರು ಹಾಗು ಮತಗಳ ಪ್ರಮಾಣದಲ್ಲಿ ವಾರ್ತಾಭಾರತಿ - ಸಂಕಲ್ಪ್ ಸಮೀಕ್ಷೆ ಬಹುತೇಕ ಸರಿಯಾಗಿದೆ.
ವಾರ್ತಾಭಾರತಿ - ಸಂಕಲ್ಪ್ ಸಮೀಕ್ಷೆಯಲ್ಲಿ ಯಾರು ಗೆಲ್ಲುತ್ತಾರೆ, ಪಕ್ಷಗಳು ಗಳಿಸುವ ಮತಗಳ ಪ್ರಮಾಣ ಹಾಗು ಗೆಲುವಿನ ಅಂತರವನ್ನು ಹೇಳಲಾಗಿತ್ತು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿರುವುದು ನಿಜವಾಗಿದೆ.
ಮತಗಳ ಪ್ರಮಾಣದಲ್ಲೂ ಸಮೀಕ್ಷೆ ಬಹುತೇಕ ಸರಿಯಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ 43 ರಿಂದ 46% ಮತ ಗಳಿಸಬಹುದು ಎಂದು ಸಮೀಕ್ಷೆ ಹೇಳಿತ್ತು. ಬಿಜೆಪಿ 42.9 % ಮತ ಗಳಿಸಿದೆ. ಆದರೆ ಕಾಂಗ್ರೆಸ್ 43 ರಿಂದ 48 % ಮತ ಗಳಿಸಬಹುದು ಎಂಬ ಸಮೀಕ್ಷೆಯ ಲೆಕ್ಕಾಚಾರ ತಪ್ಪಾಗಿದೆ. ಕಾಂಗ್ರೆಸ್ ಗೆ 55.41% ಮತಗಳು ಬಂದಿವೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 2,000 ರಿಂದ 3,500 ಮತಗಳು ಎಂದು ಸಮೀಕ್ಷೆ ಹೇಳಿತ್ತು. ಆದರೆ ಕಾಂಗ್ರೆಸ್ 22,332 ಮತಗಳ ಅಂತರದಿಂದ ಗೆದ್ದಿದೆ.
ದಾವಣಗೆರೆ ದಕ್ಷಿಣದಲ್ಲಿ ಸಮೀಕ್ಷೆಯ ಅಂಶಗಳು ಬಹುತೇಕ ಸರಿಯಾಗಿವೆ. ಕಾಂಗ್ರೆಸ್ ಗೆ 43% ರಿಂದ 51% ಮತ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್ ಗೆ 43.9% ಮತ ಬಂದಿದೆ. ಬಿಜೆಪಿಗೆ 42 ರಿಂದ 50% ಮತ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು. ಬಿಜೆಪಿಗೆ 40.34% ಮತಗಳು ಬಂದಿವೆ.
ದಾವಣಗೆರೆಯಲ್ಲಿ ಎಸ್ ಡಿ ಪಿ ಐ ಪಕ್ಷ ಈ ಬಾರಿ ಗಮನಾರ್ಹ ಸಂಖ್ಯೆಯಲ್ಲಿ ಮತ ಗಳಿಸಲಿದೆ ಹಾಗು ಅದರಿಂದ ಕಾಂಗ್ರೆಸ್ ಸಾಕಷ್ಟು ಮತಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿರುವುದು ನಿಜವಾಗಿದೆ. 6% ಮತ ಎಸ್ ಡಿ ಪಿ ಐ ಗೆ ಹೋಗಬಹುದು ಎಂದು ಸಮೀಕ್ಷೆ ಹೇಳಿತ್ತು. ಆ ಪಕ್ಷ 12% ಮತ ಗಳಿಸಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ 1,500 ರಿಂದ 2,600 ಮತಗಳ ಅಂತರದಿಂದ ಗೆಲ್ಲಬಹುದು ಎಂದಿತ್ತು ಸಮೀಕ್ಷೆ. ಕಾಂಗ್ರೆಸ್ 5,708 ಮತಗಳಿಂದ ಗೆದ್ದಿದೆ. ಕಳೆದ ಬಾರಿಗಿಂತ ಕಾಂಗ್ರೆಸ್ ಗೆಲುವಿನ ಅಂತರ ಸಾಕಷ್ಟು ಕಡಿಮೆಯಾಗಲಿದೆ ಹಾಗು ತೀವ್ರ ಪೈಪೋಟಿಯ ಸ್ಪರ್ಧೆ ಇರಲಿದೆ ಎಂದಿರುವುದು ಸರಿಯಾಗಿದೆ.
ವಾರ್ತಾಭಾರತಿ ಹಾಗು ಬೆಂಗಳೂರಿನ ರಾಜಕೀಯ ಸಂಶೋಧನಾ ಸಂಸ್ಥೆ ಸಂಕಲ್ಪ್ ಇದೇ ಮೊದಲ ಬಾರಿ ಪರೀಕ್ಷಾರ್ಥವಾಗಿ ಮತದಾನೋತ್ತರ ಸಮೀಕ್ಷೆ ನಡೆಸಿದ್ದವು. ಮೊದಲ ಪ್ರಯತ್ನದಲ್ಲಿ ಸಮೀಕ್ಷೆಯ ಹಲವಾರು ಅಂಶಗಳು ಫಲಿತಾಂಶದೊಂದಿಗೆ ತಾಳೆಯಾಗಿವೆ ಎಂಬುದು ಗಮನಾರ್ಹ. ಇದು ಮುಂದೆ ದೊಡ್ಡ ಪ್ರಮಾಣದಲ್ಲಿ ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ಹುಮ್ಮಸ್ಸು ನೀಡಿದೆ.






