ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಒದಗಿಸಲು ‘ವಯೋ ವಂದನಾ ಯೋಜನೆ’ ಜಾರಿ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು ಸೆ.17: ರಾಜ್ಯ ಸರಕಾರವು ರಾಜ್ಯದ ಎಲ್ಲ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡಲು ‘ವಯೋ ವಂದನಾ ಯೋಜನೆ’ಯನ್ನು ಜಾರಿ ಮಾಡಿ, ಬುಧವಾರದಂದು ಆದೇಶ ಹೊರಡಿಸಿದೆ.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿಯೇ ವಯೋ ವಂದನಾ ಯೋಜನೆಯನ್ನು ವಿಸ್ತರಿಸಲಾಗಿದೆ. ಕುಟುಂಬಗಳಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರ ಚಿಕಿತ್ಸೆಗಾಗಿ ಹೆಚ್ಚುವರಿ 5 ಲಕ್ಷ ರೂ.ಗಳವರೆಗೆ ಖರ್ಚು ಮಾಡಲಾಗುವುದು. ಹಿರಿಯ ನಾಗರಿಕರು 5 ಲಕ್ಷ ರೂ.ಗಳ ಮೂಲ ಕುಟುಂಬದ ವ್ಯಾಲೆಟ್ ಅನ್ನು ಪೂರ್ಣವಾಗಿ ಅಥವಾ ಭಾಗಶಃ ಬಳಸಿದರೆ, ಆರೋಗ್ಯ ಕರ್ನಾಟಕ ಯೋಜನೆಯಡಿ ಕುಟುಂಬದ ಇತರ ಸದಸ್ಯರಿಗೆ 5 ಲಕ್ಷ ರೂ.ಗಳವರೆಗೆ ನೆರವು ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಯೋಜನೆಯ ನೋಂದಣಿಗೆ ಅಗತ್ಯವಿರುವ ಏಕೈಕ ದಾಖಲೆಯಾದ ಆಧಾರ್ ಕಾರ್ಡ್ ಮೂಲಕ ವಯಸ್ಸನ್ನು ಪರಿಶೀಲಿಸಲಾಗುತ್ತದೆ. ಯೋಜನೆಯಡಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಹೊಸ ಕುಟುಂಬಗಳಿಗೆ ಸೇರಿದವರಾಗಿದ್ದರೂ, ಅರ್ಹ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲು ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯು ಕಡ್ಡಾಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.





