ಮತದಾರರ ಪಟ್ಟಿ ತಯಾರಿಯಲ್ಲಿ ಬಿಜೆಪಿ ನಾಯಕರ ಪಾತ್ರವೇ ಇಲ್ಲ: ರಾಹುಲ್ ಗಾಂಧಿ ಆರೋಪಕ್ಕೆ ಆರ್. ಅಶೋಕ್ ತಿರುಗೇಟು

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (Photo:X/@RAshokaBJP)
ಬೆಂಗಳೂರು: ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ಪಾತ್ರವೇ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತಗಳ್ಳತನ ಆಗಿದ್ದರೆ ಡಿ.ಕೆ.ಶಿವಕುಮಾರ್ ಅವರ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಆದರೆ, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರ ಪಾತ್ರವೇ ಇಲ್ಲ ಎಂದರು.
ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್ಗೆ ಬಿಎಲ್ಎಗಳನ್ನು (ಬೂತ್ ಲೆವೆಲ್ ಏಜೆಂಟ್) ಕಾಂಗ್ರೆಸ್ ನೀಡಿದೆ. ಮತದಾರರ ಪಟ್ಟಿಯ ಮೊದಲ ಪ್ರತಿಯನ್ನು ಬಿಎಲ್ಎಗೆ ನೀಡಲಾಗುತ್ತದೆ. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್ಎ ಮಾಡುತ್ತಾರೆ. ಇಂತಹ ಬಿಎಲ್ಎಗಳನ್ನು ನೇಮಿಸಿದ ಕಾಂಗ್ರೆಸ್ ಏನು ತಪ್ಪು ಮಾಡಿಲ್ಲವೇ? ಎಂದು ಅವರು ಕೇಳಿದರು.
ಗಾಂಧಿ ಕುಟುಂಬವೇ ಅಕ್ರಮ:
‘ಮಾಜಿ ಪ್ರಧಾನಿ ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ಗೆದ್ದು ಅನರ್ಹರಾಗಿದ್ದರು. ಹೀಗೆ, ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ. ಚುನಾವಣೆಯಲ್ಲಿ ಅಕ್ರಮ ಮಾಡಿಯೇ ಎಲ್ಲರೂ ಗೆದ್ದಿದ್ದಾರೆ’ ಎಂದು ಆರ್.ಅಶೋಕ್ ಆರೋಪಿಸಿದರು.







