‘ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ’: ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದ ಡಿ.ಕೆ. ಸುರೇಶ್

ಬೆಂಗಳೂರು: ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ ವಿರುದ್ಧ ಕೋವಿಡ್ ಸಮಯದಲ್ಲಿ ಹೋರಾಡಿದಂತೆ ಹೋರಾಡಬೇಕು ಎಂದು ಪ್ರಧಾನಿ ಮೋದಿ ನೀಡಿರುವ ಸಂದೇಶದ ಕುರಿತು ಪ್ರತಿಕ್ರಿಯಿಸಿರುವ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಯಾವ ಸಮಸ್ಯೆ ಆಗುತ್ತಿದೆ, ಯಾವ ಸಮಸ್ಯೆ ಆಗುತ್ತಿಲ್ಲ ಎಂದು ಕೇಂದ್ರ ಸರಕಾರಕ್ಕೆ ಗೊತ್ತಿದೆ. ಒಟ್ಟಾರೆಯಾಗಿ ಇದೇ ಪರಿಸ್ಥಿತಿ ಮುಂದುವರಿದರೆ, ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಂಧನ ತೈಲ ಬೆಲೆ ಏರಿಕೆ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದ್ದು, ಇನ್ನಷ್ಟು ತಟ್ಟಲಿದೆ. ಕೆಲವು ಉತ್ಪನ್ನಗಳ ಅಭಾವದಿಂದ ದರ ಏರಿಕೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆಯನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಹೊಟೇಲ್ ಗಳು ಮಾತ್ರವಲ್ಲ. ಆಮದು ಮಾಡಿಕೊಳ್ಳುತ್ತಿರುವ ಎಲ್ಲ ವಸ್ತುಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ವಸ್ತುಗಳ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುತ್ತದೆ. ಮುಂಗಾರು ಆರಂಭವಾಗಿ ಮಳೆ ಬೀಳಲು ಆರಂಭಿಸಿದರೆ ರಸಗೊಬ್ಬರದ ಮೇಲೂ ಇದು ಪರಿಣಾಮ ಬೀರಲಿದೆ. ಇದಕ್ಕೆ ಸರಕಾರ ಸಜ್ಜಾಗಬೇಕು. 3 ತಿಂಗಳಿಗೆ ಆಗುವಷ್ಟು ದಾಸ್ತಾನು ಇರಬಹುದು. ಆದರೆ ಇಡೀ ಋತುವಿಗೆ ಸಾಲುವಷ್ಟು ದಾಸ್ತಾನು ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ಅಗತ್ಯ ತಯಾರಿ ಮಾಡಬೇಕಾಗಿದೆ ಎಂದು ಸುರೇಶ್ ತಿಳಿಸಿದರು.
ಅನಿಲ ಬಳಕೆ ಇಳಿಕೆಗೆ ಹಾಲು ಒಕ್ಕೂಟಗಳಿಗೂ ಸೂಚನೆ: ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ವಾಹನ ಬಳಸುವುದನ್ನು ತಪ್ಪಿಸಬೇಕು. ನಮ್ಮ ಹಾಲು ಒಕ್ಕೂಟಗಳಿಗೂ ಅನಿಲ ಬಳಕೆ ಪ್ರಮಾಣವನ್ನು ಇಳಿಸುವಂತೆ ಸೂಚನೆ ನೀಡಲಾಗಿದೆ. ನಾವು ಕೂಡ ಅಗತ್ಯವಸ್ತುಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಂತಹ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಜನ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಅವರು ವಿವರಿಸಿದರು.
ಹಾಲು ಒಕ್ಕೂಟಗಳಲ್ಲಿ ಸೋಲಾರ್ ಬಳಸಲು ಸಾಧ್ಯವಿಲ್ಲ. ನಾವು ಬಾಯ್ಲರ್ ಗಳ ಮೂಲಕ ಹಬೆ ಸೃಷ್ಟಿಸುತ್ತೇವೆ. ನಮ್ಮಲ್ಲಿ ಯಾರೂ ಎಲೆಕ್ಟ್ರಿಕ್ ಬಾಯ್ಲರ್ ಬಳಸುತ್ತಿಲ್ಲ. ಫರ್ನೆಸ್ ಆಯಿಲ್, ಸೌದೆ ಒಲೆ ಅಥವಾ ಗ್ಯಾಸ್ ಬಳಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಡೈರಿಯ ಒಂದು ಭಾಗದಲ್ಲಿ ಸೌದೆ ಒಲೆ ಬಳಸುವ ಅವಕಾಶವಿದ್ದು, ಬಾಯ್ಲರ್ ಗಳನ್ನು ಅದಕ್ಕೆ ಪರಿವರ್ತಿಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ ಎಂದು ಸುರೇಶ್ ತಿಳಿಸಿದರು.
ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ವಿಳಂಬ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ಬಾಗ್ಗೆ ಮಾಹಿತಿ ಇಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದು ಯಾವಾಗ ಹೇಳಿದ್ದೇನೆ? ನಾನು ಕೆಎಂಎಫ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿಲ್ಲವಲ್ಲ. ನನ್ನ ಪರವಾಗಿ ಬೇಡಿಕೆ ಇಡುತ್ತಿರುವವರು ನನಗೆ ಕಾಣಿಸುತ್ತಿಲ್ಲ ಎಂದರು.






