ಮರು ಜಾತಿ ಗಣತಿ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸ್ವಾಗತ

ಬೆಂಗಳೂರು: ರಾಜ್ಯ ಸರಕಾರ ಮರು ಜಾತಿ ಗಣತಿ ಮಾಡಲು ಮುಂದಾಗಿರುವ ನಿರ್ಣಯವನ್ನು ಸ್ವಾಗತಿಸುತ್ತೇನೆ. ಈ ಸಮೀಕ್ಷೆ ನಿಗದಿತ ಕಾಲಾವಧಿಯಲ್ಲಿ ಮುಗಿಯಬೇಕು. ಗೊಂದಲಗಳು ಬಗೆಹರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೋರಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆಯನ್ನು ನೀಡಿರುವ ಅವರು, ಮರು ಜಾತಿ ಗಣತಿ ನಿರ್ಣಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ
ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆ ನಡೆಸಿದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯನ್ನು ಸರಕಾರ ತಾತ್ವಿಕವಾಗಿ ಒಪ್ಪುತ್ತದೆ ಎಂದು ಹೇಳಿತ್ತು. ಆದರೆ, ಆ ಗಣತಿಯ ಬಗ್ಗೆ ಮಠಾಧೀಶರು, ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳು, ಪ್ರಮುಖ ಜಾತಿ ಸಂಘಟನೆಗಳು ಮರು ಗಣತಿಗೆ ಒತ್ತಾಯಿಸಿದ್ದರು.
ಈ ಹಿಂದೆ ಮಾಡಿದ ಜಾತಿ ಗಣತಿಯಲ್ಲಿ ಹಲವು ಗೊಂದಲಗಳಿವೆ ಎಂದು ಆಕ್ಷೇಪಿಸಿದ್ದವು. ಅಲ್ಲದೇ, ಮರು ಸಮೀಕ್ಷೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಸರಕಾರ ಮರು ಸಮೀಕ್ಷೆ ನಿರ್ಣಯ ಪ್ರಕಟಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.