ಜಾತಿ ಗಣತಿ | 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ?: ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನೆ

ಬೆಂಗಳೂರು: ಜಾತಿ ಗಣತಿ ವಿಷಯದಲ್ಲಿ 10 ವರ್ಷಗಳ ತಪ್ಪು ದತ್ತಾಂಶವನ್ನು ಪದೇಪದೇ ರಾಜ್ಯದ ಜನರಿಗೆ ಹೇಳುತ್ತ ಬಂದಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಹಿಂದಿನ ಜಾತಿ ಸಮೀಕ್ಷೆಯನ್ನು ಕೈಬಿಟ್ಟಿದ್ದೇವೆ ಎನ್ನುತ್ತಿದ್ದು, 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆಗಾರರು? ಹಿಂದಿನ ಸಮೀಕ್ಷೆಗೆ ಮಾಡಿದ ಖರ್ಚಿಗೆ ಯಾರನ್ನು ಹೊಣೆಯಾಗಿ ಮಾಡುತ್ತೀರಿ? ಹೊಸ ಸಮೀಕ್ಷೆಗೆ ತಗಲುವ ವೆಚ್ಚಕ್ಕೆ ಯಾರನ್ನು ಜವಾಬ್ದಾರರನ್ನಾಗಿ ಮಾಡುವಿರಿ? ರಾಜ್ಯದ ತೆರಿಗೆ ಹಣವನ್ನು ನಿಮಗೆ ಬೇಕಾದಂತೆ ನೀರಿನಲ್ಲಿ ಹೋಮ ಮಾಡಲು ತಯಾರಿ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಹಿಂದಿನ ವರದಿ ಬಗ್ಗೆ ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ದತ್ತಾಂಶದ ಬಗ್ಗೆ ಹೈಕಮಾಂಡ್ ಅನುಮಾನ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ. ದತ್ತಾಂಶವೇ ಸರಿ ಇಲ್ಲದೇ ಇರುವಾಗ ಅದನ್ನು ಆಧರಿಸಿ ಅವರು ಪ್ರವರ್ಗಗಳನ್ನು ಹೇಗೆ ನಿರ್ಮಾಣ ಮಾಡಿದ್ದಾರೆ? ಮೀಸಲಾತಿ ವರ್ಗೀಕರಣಕ್ಕೆ ಅದನ್ನು ಹೇಗೆ ಬಳಸಿದ್ದಾರೆ ಎಂದು ಸುನಿಲ್ ಕುಮಾರ್ ಕೇಳಿದರು.
ಬಿಜೆಪಿ ನಾಯಕರು ಇದರ ಕುರಿತು ಪ್ರಶ್ನಿಸಿದಾಗ ಅತ್ಯಂತ ಉಡಾಫೆಯಿಂದ, ‘ನಾನು ಜಾತಿಗಣತಿಗೆ ಬದ್ಧನಿದ್ದೇನೆ. ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಪದೇಪದೇ ಹೇಳುತ್ತಿದ್ದ ಮುಖ್ಯಮಂತ್ರಿ, ಈಗ ಉಲ್ಟಾ ಹೊಡೆದುದು ನೋಡಿದರೆ ಹಲವು ರೀತಿಯ ಅನುಮಾನಗಳು ವ್ಯಕ್ತ ಆಗುತ್ತಿವೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಜನಪರ ಕಾಳಜಿ ಇದ್ದಲ್ಲಿ, ತಾನು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಎಲ್ಲವನ್ನೂ ಮಾಡಬಹುದಿತ್ತು. 10 ವರ್ಷ ಇದನ್ನು ದೊಡ್ಡ ಪ್ರಮಾಣದಲ್ಲಿ ಎಳೆಯುತ್ತ ಬಂದರು. 2024ರಲ್ಲಿ ಜಯಪ್ರಕಾಶ್ ಹೆಗ್ಡೆ, ವರದಿ ನೀಡಿದ್ದನ್ನು 14 ತಿಂಗಳ ಬಳಿಕ ಸಂಪುಟ ಸಭೆಗೆ ತಂದರು. ನಿಮ್ಮ ಬದ್ಧತೆ ಅಲ್ಲೇ ಗೊತ್ತಾಗಿತ್ತು ಎಂದು ಅವರು ಟೀಕಿಸಿದರು.
ಮತ್ತೊಂದು ಜಾತಿ ಗಣತಿ ಬೇಕೇ?: ಕೇಂದ್ರ ಸರಕಾರವು ಜಾತಿ ಗಣತಿ-ಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿ ಗಣತಿ ಮಾಡುತ್ತಿರುವಾಗ ರಾಜ್ಯ ಸರಕಾರವೂ ಮತ್ತೊಂದು ಜಾತಿ ಗಣತಿ ಮಾಡುವ ಅಗತ್ಯ ಇದೆಯೇ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.
ಎಸ್ಸಿ (ಪರಿಶಿಷ್ಟ ಜಾತಿ)ಒಳಮೀಸಲಾತಿಗೆ ಸಂಬಂಧಿಸಿ ಒಂದು ತಿಂಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದರು. ಆ ಸಮೀಕ್ಷೆಯನ್ನೇ 3 ಬಾರಿ ಮುಂದೂಡಿದ್ದೀರಿ. ಈಗ 7 ಕೋಟಿ ಜನರ ಸಮೀಕ್ಷೆಗೆ 3 ತಿಂಗಳ ಗಡುವು ನೀಡಿದ್ದು, ಯಾರನ್ನು ಯಾಮಾರಿಸಲು ಹೊರಟಿದ್ದೀರಿ. ಇದು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಹೈಕಮಾಂಡ್ ಕಾಲ್ತುಳಿತಕ್ಕೆ ಸಿಲುಕಿದ ಮುಖ್ಯಮಂತ್ರಿ: ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈ ವಿಷಯದಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಸಿದ್ದರಾಮಯ್ಯ ಹೇಳುತ್ತ, ಇದೀಗ ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಕಳೆದ 10 ವರ್ಷಗಳಿಂದ ತಾವೇ ಮಾಡಿದ ಕಾಂತರಾಜು ಆಯೋಗದ ವರದಿ, ತಮಗೆ ಅಪಾಯ ಆಗಿದೆ ಎಂದು ಅನಿಸಿದಾಗಲೆಲ್ಲ ಜಾತಿ ಗಣತಿ, ಜಾತಿ ಗಣತಿ ಎಂದು ನೂರು ಬಾರಿ ಕರ್ನಾಟಕದ ಜನರಿಗೆ ಹೇಳುತ್ತಿದ್ದರು. ಇವತ್ತು ದತ್ತಾಂಶದಲ್ಲಿ ವ್ಯತ್ಯಾಸವಾಗಿದೆ ಎಂದು ಹೈಕಮಾಂಡ್ ಹೇಳಿದ ತಕ್ಷಣ ಈ ವರದಿಯನ್ನು ಕಸದ ಬುಟ್ಟಿಗೆ ಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿರುವುದು ಕರ್ನಾಟಕದ ಜನತೆಗೆ ಮಾಡಿದ ದ್ರೋಹ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜ, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಉಪಸ್ಥಿತರಿದ್ದರು.







