‘ನಮ್ಮ ನೀರು ನಮ್ಮ ಹಕ್ಕು’ ಎಂದವರು ನೆರೆ ರಾಜ್ಯಕ್ಕೆ ನೀರು ಬಿಟ್ಟಿದ್ದು ಯಾಕೆ?: ಎಚ್.ಡಿ.ಕುಮಾರಸ್ವಾಮಿ ಕಿಡಿ
![‘ನಮ್ಮ ನೀರು ನಮ್ಮ ಹಕ್ಕು’ ಎಂದವರು ನೆರೆ ರಾಜ್ಯಕ್ಕೆ ನೀರು ಬಿಟ್ಟಿದ್ದು ಯಾಕೆ?: ಎಚ್.ಡಿ.ಕುಮಾರಸ್ವಾಮಿ ಕಿಡಿ ‘ನಮ್ಮ ನೀರು ನಮ್ಮ ಹಕ್ಕು’ ಎಂದವರು ನೆರೆ ರಾಜ್ಯಕ್ಕೆ ನೀರು ಬಿಟ್ಟಿದ್ದು ಯಾಕೆ?: ಎಚ್.ಡಿ.ಕುಮಾರಸ್ವಾಮಿ ಕಿಡಿ](https://www.varthabharati.in/h-upload/2023/08/20/1182211-19bnp-29.webp)
ಬೆಂಗಳೂರು, ಆ. 20: ‘ನೀರು ಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್’ಗೆ ಅರ್ಜಿ ಹಾಕಿದಾಕ್ಷಣ ಸರಕಾರ ಬೆದರಿ ಕಾವೇರಿ ನೀರನ್ನು ನೆರೆರಾಜ್ಯಕ್ಕೆ ಹರಿಸಿದ್ದೇಕೆ? ನ್ಯಾಯಾಲಯಕ್ಕೆ ತನ್ನ ಆಕ್ಷೇಪವನ್ನು ಏಕೆ ಸಲ್ಲಿಕೆ ಮಾಡಲಿಲ್ಲ. ನಮ್ಮ ರಾಜ್ಯದಲ್ಲಿರುವ ಜಲ ಸಂಕಷ್ಟದ ಬಗ್ಗೆ ಏಕೆ ಮನವರಿಕೆ ಮಾಡಿಕೊಡಲಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನೀರು ಬಿಟ್ಟ ವಿಷಯ ಗೊತ್ತಾದ ಕೂಡಲೇ ವಿರೋಧ ಮಾಡಿ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದೆ. ಈಗ ಸರ್ವಪಕ್ಷ ಸಭೆ ಕರೆಯುತ್ತೇವೆ, ಸುಪ್ರೀಂ ಕೋರ್ಟ್’ಗೆ ಅರ್ಜಿ ಹಾಕುತ್ತೇವೆ ಎಂದು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಅದನ್ನೇ ನೀರು ಬಿಡುವುದಕ್ಕೆ ಮೊದಲೇ ಮಾಡಬಹುದಿತ್ತು ಅಲ್ಲವೆ? ಎಂದು ಪ್ರಶ್ನಿಸಿದರು.
‘ನಮ್ಮ ನೀರು ನಮ್ಮ ಹಕ್ಕು’ ಎಂದು ಜಾಗಟೆ ಹೊಡೆದುಕೊಂಡು ಊರೂರು ತಿರುಗಾಡಿದರು, ರಾಮನಗರದಲ್ಲಿ ಗೋಡೆಗಳ ಮೇಲೆ ಸ್ಲೋಗನ್ ಬರೆದುಕೊಂಡಿದ್ದರು. ನೀರಿನ ಹಕ್ಕು ಸಾಧಿಸಿಕೊಳ್ಳುವುದು ಎಂದು ರಾಜ್ಯದ ಹಿತ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಡುವುದಾ?. ಇವರಿಂದ ರಾಜ್ಯದ ನೀರಿನ ಹಕ್ಕಿನ ರಕ್ಷಣೆ ಸಾಧ್ಯವಿಲ್ಲ’ ಎಂದು ಹೇಳಿದರು.
‘ಇಂದು ಎಲ್ಲೋ ಕಲರ್ ಫೋಟೋಗಳನ್ನು ನೋಡಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ತೊರೆಕಾಂಡನಹಳ್ಳಿಗೆ ಹೋಗಿ ಕಲಕಲರ್ ಫೆÇೀಟೋಗಳನ್ನು ತೆಗೆಸಿಕೊಂಡು ಹಾಕಿಸಿಕೊಂಡಿದ್ದಾರೆ. ನೆಟ್ಕಲ್ ಯೋಜನೆ ಮೂಲಕ ರಾಮನಗರಕ್ಕೆ ನೀರು ಕೊಡುವುದು ಡಿ.ಕೆ.ಶಿವಕುಮಾರ್ ಕನಸಿನ ಕೂಸಂತೆ. 50ರಿಂದ 60 ಕೋಟಿ ರೂ.ಇದ್ದ ತಮ್ಮ ಆಸ್ತಿಯನ್ನು 1,400 ಕೋಟಿ ರೂ.ಮಾಡಿಕೊಳ್ಳೋಕೆ ಅವರು ಕನಸು ಕಾಣುತ್ತಿದ್ದರು. ಅವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕನಸು ಕಾಣ್ತಾರಾ?’ ಎಂದು ಎಚ್ಡಿಕೆ ಲೇವಡಿ ಮಾಡಿದರು.
‘ದೇವೇಗೌಡರ ಕುಟುಂಬ ಬರುವುದಕ್ಕೆ ಮುನ್ನ ಈ ತಾಲೂಕು ಹೇಗಿತ್ತು, ಜಿಲ್ಲೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಿ. ಇವತ್ತು ರಾಮನಗರ ಜಿಲ್ಲೆ ಆಮೂಲಾಗ್ರ ಅಭಿವೃದ್ಧಿ ಹೊಂದಿದೆ. ಈಚೆಗೆ ಬಂದ ಒಂದು ವರದಿ ಪ್ರಕಾರ ತಲಾದಾಯದಲ್ಲಿ ರಾಜ್ಯದಲ್ಲಿಯೇ ರಾಮನಗರ ಮೊದಲ ಸ್ಥಾನದಲ್ಲಿದೆ. ಇದು ಈ ಜಿಲ್ಲೆಗೆ ಗೌಡರ ಕುಟುಂಬ ನೀಡಿರುವ ಕೊಡುಗೆ. ನಾನು ಮಾಡಿರುವ ಕೆಲಸಗಳಿಗೆ ಇವರು ಸುಣ್ಣಬಣ್ಣ ಹೊಡೆಸಿಕೊಂಡು ಇದ್ದರೆ ಸಾಕು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು...
‘ನಾನು ಎರಡನೇ ಅವಧಿಗೆ ಸಿಎಂ ಆಗಿದ್ದಾಗ ನೀರಿನ ಬವಣೆ ಎದುರಿಸುತ್ತಿದ್ದ ರಾಮನಗರಕ್ಕೆ ನೀರು ಕೊಡಲು 405ಕೋಟಿ ರೂ.ಕೊಟ್ಟಿದ್ದು, ರಾಮನಗರ, ಚನ್ನಪಟ್ಟಣಕ್ಕೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡಲು. ಶಿವಕುಮಾರ್ ಪ್ರಸ್ತಾವನೆ ತಂದಿದ್ದರಾ? ಇಲ್ಲವೇ ಅವರ ತಮ್ಮ ಡಿ.ಕೆ.ಸುರೇಶ್ ತಂದಿದ್ದರಾ? ಇವರು ರೈತರ ಭೂಮಿ ಲೂಟಿ ಹೊಡೆಯುದ್ದಾರೆ. ಎಲ್ಲ ದಾಖಲೆಗಳನ್ನು ಸದ್ಯದಲ್ಲೇ ಜನರ ಮುಂದೆ ಇಡುತ್ತೇನೆ’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ