ಬಿಜೆಪಿ ಮತಪ್ರಮಾಣ ಏರಿಕೆಯಿಂದ ರಾಹುಲ್ ಗಾಂಧಿಗೆ ಅಸಮಾಧಾನ ಏಕೆ: ಅರವಿಂದ ಲಿಂಬಾವಳಿ ಪ್ರಶ್ನೆ

ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಮತ ಪ್ರಮಾಣದ ಗ್ರಾಫ್ ಏರಿಕೆಯಾಗುತ್ತಿದೆ. ಇದಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಸಮಾಧಾನ ಏಕೆ ಏಂದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮಹದೇವಪುರದಲ್ಲಿ ಸಕ್ರಮವಾಗಿಯೇ ಚುನಾವಣೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಅಲ್ಲಿ ಸಹಜ ಬೆಳವಣಿಗೆ ಇದೆ. ರಾಹುಲ್ ಗಾಂಧಿಯವರೇ ಇದನ್ನು ಅರ್ಥ ಮಾಡಿಕೊಳ್ಳಿ. ಇಷ್ಟುದಿನ ಇವಿಎಂ ಬೈಯುತ್ತಿದ್ದರು. ಇದೀಗ ಮತದಾರರ ಪಟ್ಟಿಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ, ಚುನಾವಣಾ ಆಯೋಗದ ಜೊತೆ ಸೇರಿ ಗೋಲ್ಮಾಲ್ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಹದೇವಪುರದಲ್ಲಿ 40,009 ನಕಲಿ ಮತ್ತು ಅಸಿಂಧು ಮತಗಳಿವೆ, ಒಂದೇ ವಿಳಾಸದ 10,452 ಬಲ್ಕ್ ಮತದಾರರು, ಫಾರ್ಮ್ 6ರ(ಹೊಸ ಮತದಾರ) ದುರ್ಬಳಕೆ-33692, ಡುಪ್ಲಿಕೇಟ್ ಮತದಾರರ ಸಂಖ್ಯೆ 11,965 ಇದೆ. 4132 ಅಸಮರ್ಪಕ ಫೋಟೊ ಇರುವ ಮತದಾರರಿದ್ದಾರೆಂಬ ಆರೋಪ ಮಾಡಿ ಏಳು ಉದಾಹರಣೆ ನೀಡಿದ್ದಾರೆ. ಇದರ ರಿಯಾಲಿಟಿ ಚೆಕ್ ಮಾಡಿದ್ದೇವೆ. ಗುರುಕಿರೀಟ್ ಸಿಂಗ್ ಹೆಸರು 4 ಬಾರಿ ಮತದಾರರ ಪಟ್ಟಿಯಲ್ಲಿದೆ. ಅವರು ತಮ್ಮ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ಕಡೆ ಕಾಣಿಸಿಕೊಂಡಿದೆ. 3 ಕಡೆ ಹೆಸರು ರದ್ದತಿಗೆ ಕೋರಿದ್ದಾರೆ ಎಂದು ಅವರು ಸ್ಪಷ್ಟಣೆ ನೀಡಿದರು.
ಲಕ್ನೋದ ಆದಿತ್ಯ ಶ್ರೀವಾಸ್ತವ 19 ವರ್ಷ ಇದ್ದಾಗ ಲಕ್ನೋದಲ್ಲಿ ಹೆಸರು ಸೇರ್ಪಡೆಯಾಗಿದೆ. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು. ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಸೇರಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ ಎಂದು ವಿಡಿಯೋ ಮೂಲಕ ಮಾಹಿತಿ ಕೊಟ್ಟರು. 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅವನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ ಎಂದರು.
2008ರಲ್ಲಿ ಮಹದೇವಪುರ ಹೊಸ ಕ್ಷೇತ್ರ ರಚನೆ ಆಗಿದೆ. ಹಳೆ ವರ್ತೂರು ಕ್ಷೇತ್ರ ಮಹದೇವಪುರ, ಕೆ.ಆರ್.ಪುರ, ಸಿವಿ ರಾಮನ್ ನಗರ..ಹೀಗೆ 3 ಕ್ಷೇತ್ರಗಳಾಗಿ ಪರಿವರ್ತನೆಗೊಂಡಿತು. ಅಲ್ಲಿಂದೀಚೆಗೆ 4 ಬಾರಿ ವಿಧಾನಸಭೆ-ಲೋಕಸಭಾ ಚುನಾವಣೆ ನಡೆದಿದೆ. 4 ಬಾರಿಯೂ ಬಿಜೆಪಿ ಗೆದ್ದಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ 6,07,135 ಜನ ಮತದಾರರಿದ್ದು, 3,29,841 ಜನರು ಮತ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರಿದ್ದರು. 3,51,535 ಜನರು ಮತ ಚಲಾಯಿಸಿದ್ದರು. ಇದೀಗ 6,80,514 ಜನ ಮತದಾರರು ಮಹದೇವಪುರ ಕ್ಷೇತ್ರದಲ್ಲಿ ಇದ್ದಾರೆ ಎಂದರು.
ವಲಸೆ ಬರುವವರು ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಹೀಗಾಗಿ ಮತದಾರರ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗುತ್ತದೆ. ಹೊರ ಹೋಗುವವರ ಸಂಖ್ಯೆಯೂ ಗಣನೀಯವಾಗಿದೆ. 3 ಬಾರಿ ಲೋಕಸಭೆ, 3 ಬಾರಿ ವಿಧಾನಸಭೆಗೆ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತ ಬಂದಿದೆ. ಬಿಜೆಪಿ ಮತಪ್ರಮಾಣ ಹೆಚ್ಚುತ್ತ ಸಾಗಿದೆ ಎಂದರು.
ರಾಹುಲ್ ಗಾಂಧಿ ನಿನ್ನೆ ಮಾಧ್ಯಮದವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿತ್ತು, ಮಹದೇವಪುರದಲ್ಲಿ ಮಾತ್ರ ಬಿಜೆಪಿಗೆ ಅಧಿಕ ಲೀಡ್ ಲಭಿಸಿ ಗೆದ್ದಿದ್ದಾರೆ ಎಂದಿದ್ದಾರೆ. ಇದು ಸುಳ್ಳು. ಲೋಕಸಭಾ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ ಮುಂದೆ ಇತ್ತು. ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್ ನಗರ, ಮಹದೇವಪುರದಲ್ಲಿ ಬಿಜೆಪಿ ಲೀಡ್ ಪಡೆದಿತ್ತು ಎಂದರು.







