ಕುರ್ಚಿ ಬದಲಾಯಿಸಿ, ನಾನು ಹೊಂದಾಣಿಕೆ ಆಗದ ವಿಪಕ್ಷ ನಾಯಕ : ಯತ್ನಾಳ್

ಬೆಂಗಳೂರು, ಆ.19: ನಾನು ಹೊಂದಾಣಿಕೆ ಆಗದ ವಿರೋಧ ಪಕ್ಷದ ನಾಯಕ. ಹೀಗಾಗಿ, ನನ್ನ ಆಸನ ಬದಲಾವಣೆ ಮಾಡುವಂತೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಕೋರಿದರು.
ಮಂಗಳವಾರ ಭೋಜನಾ ವಿರಾಮದ ಬಳಿಕ ಪ್ರಶ್ನೋತ್ತರ ಕಲಾಪ ಆರಂಭಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಿಂದ ಉಚ್ಚಾಟನೆಗೊಂಡ ತಮ್ಮನ್ನೂ ಸೇರಿದಂತೆ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರಿಗೆ ಕಲ್ಪಿಸಿದ ಆಸನ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರಹಾಕಿದರು.
ತಮಗೆ ಸದನದಲ್ಲಿ ಹಿಂದಿನ ಸಾಲಿನ ಕುರ್ಚಿ ನೀಡಿದ್ದನ್ನು ಉಲ್ಲೇಖಿಸಿದ ಯತ್ನಾಳ್ ಅವರು, ಸಭಾಧ್ಯಕ್ಷರೇ, ನನಗೆ ಪ್ರತಿಪಕ್ಷ ಸ್ಥಾನದ ಸಾಲಿನ ಆಸನ ಮೀಸಲಿಡಬೇಕು. ಈ ಸದನಕ್ಕೆ ನಾನು ಹಿರಿಯ ಸದಸ್ಯನಾದರೂ, ನನಗೆ ಹಿಂದೆ ಕೂರಿಸಿದ್ದಾರೆ. ಶಿವರಾಂ ಹೆಬ್ಬಾರ್, ಸೋಮಶೇಖರ್ಗೂ ಸೂಕ್ತ ವ್ಯವಸ್ಥೆ ಇಲ್ಲ ಎಂದು ಉಲ್ಲೇಖಿಸಿದರು.
ರಾಜ್ಯದಲ್ಲಿರುವುದೇ 224 ವಿಧಾನಸಭಾ ಕ್ಷೇತ್ರಗಳು. ಸದನದಲ್ಲಿ ನನಗೆ 224ನೆ ಸಂಖ್ಯೆಯ ಆಸನ ಕೊಟ್ಟಿದ್ದಾರೆ. ನನಗೆ ಮುಂದಿನ ಆಸನ, ಇಲ್ಲವೇ ಪ್ರತಿಪಕ್ಷ ಆಸನ ಕೊಡಿ. ಅದು ಅಲ್ಲದೆ, ನಾನು ಹೊಂದಾಣಿಕೆ ಆಗದ ವಿರೋಧ ಪಕ್ಷದ ನಾಯಕ ಎಂದು ಹೇಳಿದರು. ಆಗ ಯತ್ನಾಳ್ ಮಾತಿಗೆ ಸ್ಪೀಕರ್ ಯು.ಟಿ.ಖಾದರ್ ಸೇರಿ ಇಡೀ ಸದನ ನಗೆಗಡಲಲ್ಲಿ ತೇಲಿತು.







