‘ದಾವಣಗೆರೆ ದಕ್ಷಿಣ ಉಪಚುನಾವಣೆ’ ಗೆಲುವಿಗೆ ಝಮೀರ್ ಅಹ್ಮದ್ ಕಾರಣ : ಅಬ್ದುಲ್ ಜಬ್ಬಾರ್

ಬೆಂಗಳೂರು, ಮೇ 6 : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಫಲಿತಾಂಶ ಬರುವ ಮುನ್ನವೆ ಹೇಳಿದ್ದೆ. ನಮ್ಮ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಸಚಿವ ಝಮೀರ್ ಅಹ್ಮದ್ ಭೇಟಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣ ಎಂದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಝಮೀರ್ ಅಹ್ಮದ್ ದಾವಣಗೆರೆಗೆ ಭೇಟಿ ನೀಡಿದ ಪರಿಣಾಮವಾಗಿ ಅಲ್ಲಿ ಅಲ್ಪಸಂಖ್ಯಾತ ಮುಖಂಡರಲ್ಲಿನ ಅಸಮಾಧಾನ ಶಮನವಾಗಿತ್ತು. ಈಗಾಗಲೆ ಮುಖ್ಯಮಂತ್ರಿ ನೂರು ಕೋಟಿ ರೂ. ಕೊಟ್ಟಿದ್ದಾರೆ. ನೂತನ ಶಾಸಕರು ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು ಹೇಳಿದರು.
ಈ ಉಪ ಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಪಡೆದಿರುವ ಶೇ.100ರಷ್ಟು ಮತಗಳು ಕಾಂಗ್ರೆಸ್ ಮತಗಳು. ಶಾಮನೂರು ಶಿವಶಂಕರಪ್ಪ ಇದ್ದಾಗಲೆ ನಾವು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವಂತೆ ಕೇಳಿದ್ದೆವು. ಅವರು ನಿಧನ ಹೊಂದಿದ ಬಳಿಕವೂ ಕೇಳಿದೆವು. ಆ ಕಾರಣಕ್ಕೆ ಇಷ್ಟೆಲ್ಲ ಬೆಳವಣಿಗೆಗಳು ಆಯಿತು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಬಹುದು. ತಪ್ಪುಗಳನ್ನು ಸರಿ ಮಾಡಲು ಅವಕಾಶ ಇದೆ. ಅವಕಾಶ ಕೈ ಚೆಲ್ಲಿದರೆ ಭವಿಷ್ಯದಲ್ಲಿ ಪುನಃ ಅನಾಹುತಗಳು ಆಗುತ್ತವೆ ಎಂದು ಅಬ್ದುಲ್ ಜಬ್ಬಾರ್ ಎಚ್ಚರಿಸಿದರು.






