ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಮತೀಯ ಬಣ್ಣ ಬಳಿಯಲು ಯತ್ನಿಸಿದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ
ಉದ್ರೇಕಕಾರಿ ಭಾಷಣ ಬಿಗಿದ ಬಿಜೆಪಿ ಶಾಸಕರ ಸಹಿತ ಸಂಘಪರಿವಾರದ ಮುಖಂಡರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲು ಆಗ್ರಹ

ಮಂಗಳೂರು: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಮತೀಯ ಬಣ್ಣ ಬಳಿದು ಅಶಾಂತಿ ಉಂಟುಮಾಡಲು ಯತ್ನಿಸಿದ ಕೋಮುವಾದಿಗಳ ಕ್ರಮವನ್ನು ವಿರೋಧಿಸಿ ಡಿವೈಎಫ್ಐ, ಎಸ್ ಎಫ್ಐ,ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ದಿಗಂತ್ ನಾಪತ್ತೆ ವಿಚಾರದಲ್ಲಿ ಉದ್ರೇಕಕಾರಿ ಭಾಷಣ ಬಿಗಿದ ಬಿಜೆಪಿ ಶಾಸಕರ ಸಹಿತ ಸಂಘಪರಿವಾರದ ಮುಖಂಡರ ಮೇಲೆ ಸುಮೋಟೋ ಪ್ರಕರಣದಡಿ ಕಾನೂನು ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್ ಅವರು, ಸಂಘ ಪರಿವಾರದ ಸಂಘಟನೆಗಳು ನಿರಂತರ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದ್ದರೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿರುವುದರಿಂದ ಮತ್ತೆ ಮತ್ತೆ ಕೋಮು ಸಂಘರ್ಷ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆಪಾದಿಸಿದರು.
ಸಾಮಾಜಿಕ ಹೋರಾಟಗಾರರ ಮೇಲೆ ಕೇಸು ದಾಖಲಿಸುವ ಪೊಲೀಸರಿಗೆ ಸಂಘ ಪರಿವಾರದವರ ಮೇಲೆ ಕೇಸು ದಾಖಲಿಸುವ ಧೈರ್ಯ ಯಾಕಿಲ್ಲ ಎಂದು ಪ್ರಶ್ನಿಸಿದರು.
ಚಕ್ರವರ್ತಿ ಸೂಲಿಬೆಲೆಗೆ ಜನಸಂಖ್ಯೆಯ ಅನುಪಾತದ ಅರಿವಿಲ್ಲ; ಸಮಾಜ ಒಡೆಯಲು ಸುಳ್ಳು ಬೊಗಳೆ ಬಿಡುತ್ತಿದ್ದಾರೆ. ಘರ್ ವಾಪಸಿ ಬಿಜೆಪಿ ಸಂಘ ಪರಿವಾರದ ಉನ್ನತ ನಾಯಕರ ಕುಟುಂಬಗಳಿಂದ ಮೊದಲು ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಸಂಘಪರಿವಾರ ಹಾಗೂ ಬಿಜೆಪಿ ಶಾಸಕರು ವಿದ್ಯಾರ್ಥಿ ದಿಗಂತ್ ಪ್ರಕರಣದಲ್ಲಿ ಬೆತ್ತಲಾಗಿದ್ದಾರೆ. ಇವರು ಪ್ರತೀ ಬಾರಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನದಲ್ಲಿ ಮತೀಯ ಸಂಘರ್ಷಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಉತ್ತರ ಕನ್ನಡದ ಪರೇಶ್ ಮೇಸ್ತ, ತೀರ್ಥಹಳ್ಳಿಯ ನಂದಿತಾ, ಕೊಣಾಜೆಯ ಕಾರ್ತಿಕ್ ರಾಜ್ ಈಗ ದಿಗಂತ್ ಪ್ರಕರಣಗಳೆಲ್ಲವನ್ನು ಗಮನಿಸಿದರೆ ಇವರ ನೈಜ ಉದ್ದೇಶ ಬಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷ ಭಾಷಣ ನಡೆಸುವವರ ಮೇಲೆ ಕ್ರಮಕೈಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರೂ ಜಿಲ್ಲೆಯಲ್ಲಿ ಸಂಘಪರಿವಾದ ಮುಖಂಡರ ಮೇಲೆ ಒಂದೇ ಒಂದು ಪ್ರಕರಣ ದಾಖಲಿಸಲು ಹಿಂಜರಿಯುತ್ತಿರುವ ನಡೆ ಅತ್ಯಂತ ಖಂಡನೀಯ. ಪೊಲೀಸ್ ಇಲಾಖೆ ಕೂಡಲೇ ಶಾಸಕ ಭರತ್ ಶೆಟ್ಟಿ, ಹರೀಶ್ ಪೂಂಜಾ ಮತ್ತು ಸಂಘಪರಿವಾರದ ನಾಯಕರ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜೆಎಮ್ಎಸ್ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ರಿಜ್ವಾನ್ ಹರೇಕಳ, ರಝಾಕ್ ಮುಡಿಪು, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ಜೆಎಮ್ಎಸ್ ನ ಭಾರತೀ ಬೋಳಾರ, ಪ್ರಮೀಳಾ, ಅಸುಂತ ಡಿಸೋಜ, ಯೋಗಿತಾ, ಅಮ್ಮೆಮ್ಮಾರ್ ಪಂಚಾಯತ್ ಮಾಜಿ ಸದಸ್ಯ ಹನೀಫ್, ಬಶೀರ್ ತಂಡೇಲ್, ವಿ.ಎಚ್ ಕರೀಂ, ಹೈದರ್ ಅಮ್ಮೆಮ್ಮಾರ್, ಅಶ್ರಫ್ ಅಸ್ರ, ಬೀದಿಬದಿ ವ್ಯಾಪಾರ ಸಂಘಟನೆಯ ಮುಝಾಫರ್, ನೌಶಾದ್ ಕಣ್ಣೂರು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಶೇಖರ್ ಕುಂದರ್, ಆಸೀಫ್ ಬಂದರು, ನೌಶಾದ್ ಬೆಂಗರೆ, ಯೋಗೀಶ್ ಜಪ್ಪಿನಮೊಗರು, ಅನ್ಸಾರ್ ಫೈಸಲ್ ನಗರ, ರಫೀಕ್ ಪಿ.ಜಿ, ಮುಹಾಝ್, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಸ್ವಾಗತಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ವಿನುಶ ರಮಣ ವಂದಿಸಿದರು.







