ಜಿರಳೆಗಳು ಒಟ್ಟಾದ ಹೊತ್ತು

ಪ್ರಸ್ತುತ ವಿದ್ಯಾರ್ಥಿಗಳ ದಂಗೆಯು ಒಂದು ಗಮನಾರ್ಹ ರೀತಿಯಲ್ಲಿ ಜೆಪಿ ಚಳವಳಿಯನ್ನು ಹೋಲುತ್ತದೆ. ಇವೆರಡರ ಪ್ರಮುಖ ಗುರಿಗಳು ಸರ್ವಾಧಿಕಾರತ್ವ ಮತ್ತು ವ್ಯಕ್ತಿತ್ವದ ಆರಾಧನೆ. ಇವನ್ನು 1970ರ ದಶಕದಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪಕ್ಷ ಪ್ರತಿನಿಧಿಸಿದ್ದರೆ, ಈಗ ನರೇಂದ್ರ ಮೋದಿ ಮತ್ತು ಅವರ ಪಕ್ಷ ಇವನ್ನು ಪ್ರತಿನಿಧಿಸುತ್ತಿದೆ. ಆದರೂ ಪ್ರಮುಖ ವ್ಯತ್ಯಾಸಗಳಿವೆ. ಆಗ ಎಬಿವಿಪಿ ಆಡಳಿತದ ವಿರುದ್ಧವಾಗಿತ್ತು; ಈಗ ಅದು ಆಡಳಿತದ ಪರವಾಗಿ ದೃಢವಾಗಿದೆ. ಜೆಪಿ ಚಳವಳಿಗೆ ಹೋಲಿಸಿದರೆ, ಪ್ರಸ್ತುತ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಗೋಚರಿಸುತ್ತಿದ್ದರು. ಅವರ ಆದರ್ಶವಾದ ಮತ್ತು ಧೈರ್ಯವು 1942ರ ಮಹಿಳಾ ಸತ್ಯಾಗ್ರಹಿಗಳನ್ನು ನೆನಪಿಸುತ್ತದೆ ಎಂದು ತೋರುತ್ತದೆ.
ಜುಲೈ ಆರಂಭದಲ್ಲಿ, ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದಾಗ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸ್ವತಃ ಬಂದು ಬೆಂಬಲ ವ್ಯಕ್ತಪಡಿಸಿದ ಮೊದಲ ರಾಜಕಾರಣಿಗಳಲ್ಲಿ ಒಬ್ಬರು. ಮೂರು ವಾರಗಳ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದಾಗ ಮೊಯಿತ್ರಾ ಅವರು, ಈ ಫ್ಯಾಶಿಸ್ಟ್, ದುರಹಂಕಾರಿ ಸರಕಾರವು ಮಂಡಿಯೂರುವಂತೆ ಮಾಡುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಿದ್ದಕ್ಕಾಗಿ ಯುವ ಪೀಳಿಗೆಗೆ ಧನ್ಯವಾದ ಅರ್ಪಿಸಿದರು. ಅವರೇ ಹೇಳಿದಂತೆ, ಕಳೆದ ಹನ್ನೆರಡು ವರ್ಷಗಳಲ್ಲಿ ವಿರೋಧ ಪಕ್ಷಗಳು ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ.
ಮಹುವಾ ಮೊಯಿತ್ರಾ ಅವರ ಪ್ರಶಂಸೆ ಸಾರ್ಥಕವಾಗಿತ್ತು. ಶಿಕ್ಷಣ ಸಚಿವರ ರಾಜೀನಾಮೆ, ಗೃಹ ಸಚಿವರು ಸಂಸತ್ತಿಗೆ ದೀರ್ಘಕಾಲದವರೆಗೆ ಗೈರುಹಾಜರಾದುದು ಮತ್ತು ಮುಖ್ಯವಾಗಿ ಪ್ರಧಾನಿಯವರ ತಡರಾತ್ರಿಯ ವೀಡಿಯೊಗಳು ಇವೆಲ್ಲವೂ ಆಡಳಿತದ ವಾಡಿಕೆಯ ದುರಹಂಕಾರದ ಗಾಳಿಯು (ಕಡೇಪಕ್ಷ ತಾತ್ಕಾಲಿಕವಾಗಿಯಾದರೂ) ದುರ್ಬಲವಾಗಿದೆ ಮತ್ತು ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.
ವಿದ್ಯಾರ್ಥಿ ‘ಜಿರಳೆಗಳು’ ಇಲ್ಲಿಯವರೆಗೆ ಸೃಷ್ಟಿಸಿರುವ ಆವೇಗವನ್ನು ಉಳಿಸಿಕೊಳ್ಳಬಹುದೇ ಎಂದು ಹೇಳುವುದಕ್ಕೆ ಇದು ಅಪಕ್ವ ಸಮಯ. ಇದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಭರವಸೆಗಳ ಪೂರ್ಣ ನವೀಕರಣಕ್ಕೆ ಕಾರಣವಾಗುತ್ತದೆ. ಇತಿಹಾಸಕಾರರು ಜ್ಯೋತಿಷಿಗಳಲ್ಲ. ಆದ್ದರಿಂದ, ಮುಂದೆ ನೋಡುವ ಬದಲು ನಾನು ಇಲ್ಲಿ ಹಿಂದಿರುಗಿ ನೋಡುತ್ತೇನೆ. ಭಾರತೀಯ ವಿದ್ಯಾರ್ಥಿಗಳು ರಾಜಕೀಯ ಮತ್ತು ಸಾರ್ವಜನಿಕ ಜೀವನದ ಮೇಲೆ ತಮ್ಮ ಪ್ರಭಾವ ಬೀರಲು ಪ್ರಯತ್ನಿಸಿದ ಹಿಂದಿನ ಇತರ ಸಮಯಗಳನ್ನು ಅನ್ವೇಷಿಸುತ್ತೇನೆ. ಅಂತಹ ಮೊದಲ ಸಂದರ್ಭವೆಂದರೆ, ನೂರ ಇಪ್ಪತ್ತು ವರ್ಷಗಳ ಹಿಂದೆ, ಬಂಗಾಳದಲ್ಲಿನ ಸ್ವದೇಶಿ ಚಳವಳಿಯ ಸಮಯ. ಆ ನಿರ್ದಿಷ್ಟ ಸಂದರ್ಭದ ಕುರಿತಾದ ತಮ್ಮ ಪುಸ್ತಕದಲ್ಲಿ ಸುಮಿತ್ ಸರ್ಕಾರ್ ಗಮನಿಸಿದಂತೆ, ಪ್ರತಿಯೊಂದು ಜಿಲ್ಲೆಯ ವಿದ್ಯಾರ್ಥಿಗಳು ಕೋಲ್ಕತಾದಲ್ಲಿ ಅಧ್ಯಯನ ಮಾಡಲು ಬಂದರು ಮತ್ತು ನಿಸ್ಸಂದೇಹವಾಗಿ ಅವರ ಮೂಲಕವೇ ಚಳವಳಿ ಆರಂಭದಲ್ಲಿ ಮೊಫುಸಿಲ್ಗೆ ಹರಡಿತು. ಹೆಚ್ಚು ಪ್ರಮುಖ ನಾಯಕರು ಸ್ಥಾಪಿತ ವೃತ್ತಿಪರ ಮತ್ತು ಭೂಮಾಲಕ ವರ್ಗಗಳಿಂದ ಬಂದವರಾಗಿದ್ದರೂ, ಸ್ವಯಂಸೇವಕರು ಹೆಚ್ಚಾಗಿ ವಿದ್ಯಾರ್ಥಿ ಸಮುದಾಯದಿಂದ ಬಂದಿದ್ದರು ಮತ್ತು ಅವರಲ್ಲಿ ಹಲವರು ಅತ್ಯಂತ ಎಳೆಯ ವಯಸ್ಸಿನವರಾಗಿದ್ದರು ಎಂದು ಸರ್ಕಾರ್ ಬರೆಯುತ್ತಾರೆ.
ನಂತರದ ವರ್ಷಗಳಲ್ಲಿ, ಮಹಾತ್ಮಾ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಚಳವಳಿಗಳಲ್ಲಿ ವಿದ್ಯಾರ್ಥಿಗಳು ಹುರುಪಿನಿಂದ ಭಾಗವಹಿಸಿದರು. ವಿದ್ಯಾರ್ಥಿಗಳು ಅಸಹಕಾರ ಮತ್ತು ನಾಗರಿಕ ಅಸಹಕಾರ ಚಳವಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡರು. ಪ್ರತಿಭಟನೆಗಳನ್ನು ನಡೆಸಿದರು ಮತ್ತು ಬಂಧಿತರಾದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಸಕ್ರಿಯರಾಗಿದ್ದರು, ಸಾವಿರಾರು ಸಂಖ್ಯೆಯಲ್ಲಿ ಜೈಲುಗಳಿಗೆ ಹೋದರು.
ಕ್ವಿಟ್ ಇಂಡಿಯಾದ ವೈಶಿಷ್ಟ್ಯವೆಂದರೆ ಯುವತಿಯರು ನಿರ್ವಹಿಸಿದ ಕ್ರಿಯಾತ್ಮಕ ಪಾತ್ರ. ಭೂಗತ ‘ಕಾಂಗ್ರೆಸ್ ರೇಡಿಯೊ’ವನ್ನು ಸಂಘಟಿಸಲು ಸಹಾಯ ಮಾಡಿದ ಬಾಂಬೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಉಷಾ ಮೆಹ್ತಾ ಅವರ ರೋಮಾಂಚಕಾರಿ ಕಥೆಯನ್ನು ಉಷಾ ಥಕ್ಕರ್ ಅವರ ಅದ್ಭುತ ಪುಸ್ತಕದಲ್ಲಿ ದಾಖಲಿಸಲಾಗಿದೆ. ಆದರೆ ಇತರ ಗಮನಾರ್ಹ (ಈಗ ಕಡಿಮೆ ಪರಿಚಿತವಾಗಿದ್ದರೆ) ಉದಾಹರಣೆಗಳೂ ಇದ್ದವು. ಆರ್ಕೈವ್ಸ್ನಲ್ಲಿ ನನಗೆ ಸಿಕ್ಕ ‘ದಂಗೆಯಲ್ಲಿ ಕರ್ನಾಟಕ’ ಎಂಬ ಶೀರ್ಷಿಕೆಯ ಫೈಲ್, ಭಾರತದ ಈ ಭಾಗದಲ್ಲಿ ಚಳವಳಿಯ ಅತ್ಯಂತ ಅಸಾಧಾರಣ ಲಕ್ಷಣವೆಂದರೆ ಬೆಳಗಾವಿ, ಗದಗ, ಬೆಂಗಳೂರು, ಮೈಸೂರು, ಮಂಗಳೂರು, ಬಿಜಾಪುರ, ಬಳ್ಳಾರಿ, ಶಿರಸಿ ಮತ್ತು ಇತರ ಸ್ಥಳಗಳಲ್ಲಿ ಬಹಿಷ್ಕಾರಗಳು ಮತ್ತು ಹರತಾಳಗಳನ್ನು ಆಯೋಜಿಸಿದ ವಿದ್ಯಾರ್ಥಿ ಸಮುದಾಯದ ಪ್ರತಿಕ್ರಿಯೆ ಎಂಬುದನ್ನು ವಿವರಿಸುತ್ತದೆ. 1942ರ ಅಕ್ಟೋಬರ್ 23ರಂದು ಧಾರವಾಡದ ಇಬ್ಬರು ವಿದ್ಯಾರ್ಥಿಗಳಾದ ಮಿಸ್ ಶೆನೋಲಿಕರ್ ಮತ್ತು ಮಿಸ್ ಗುಲವಾಡಿ ಜಿಲ್ಲಾ ನ್ಯಾಯಾಲಯಕ್ಕೆ ಪ್ರವೇಶಿಸಿ, ರಾಷ್ಟ್ರಧ್ವಜವನ್ನು ಹಾರಿಸಿ, ಅಲ್ಲಿ ಹಾಜರಿದ್ದ ಜಿಲ್ಲಾ ನ್ಯಾಯಾಧೀಶರಿಗೆ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿ, ಕರಪತ್ರಗಳನ್ನು ಹಂಚಿ, ಕಣ್ಮರೆಯಾದರು. (ಮುಂದಿನದರ ವಿವರಣೆ ಆರ್ಕೈವ್ನಲ್ಲಿ ಇಲ್ಲ. ಮಿಸ್ ಶೆನೋಲಿಕರ್ ಮತ್ತು ಮಿಸ್ ಗುಲವಾಡಿಗೆ ನಂತರ ಏನಾಯಿತು ಎಂದು ತಿಳಿಯಲು ಕುತೂಹಲವಾಗುತ್ತದೆ.)
ಸ್ವಾತಂತ್ರ್ಯಕ್ಕೆ ಮುಂಚಿನ ದಶಕಗಳಲ್ಲಿ, ವಿದ್ಯಾರ್ಥಿಗಳು ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ಭಾರತ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾದ ನಂತರದ ವರ್ಷಗಳ ಬಗ್ಗೆ ಏನು? 1968ರಲ್ಲಿ, ಅಮೆರಿಕನ್ ವಿದ್ವಾಂಸ ಫಿಲಿಪ್ ಜಿ. ಆಲ್ಟ್ಬಾಚ್ ಅವರು Turmoil and Transition: Higher Education and Student Politics in India ಎಂಬ ಪುಸ್ತಕವನ್ನು ಸಂಪಾದಿಸಿದರು. ತಮ್ಮ ಪರಿಚಯದಲ್ಲಿ ಆಲ್ಟ್ಬಾಚ್, ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಗಮನಿಸಿದ್ದಾರೆ. ಆದರೆ 1947ರಿಂದ ಹೆಚ್ಚಿನ ವಿದ್ಯಾರ್ಥಿ ಚಳವಳಿಗಳು ನೇರವಾಗಿ ರಾಜಕೀಯವಾಗಿರಲಿಲ್ಲ, ಬದಲಾಗಿ ಸೈದ್ಧಾಂತಿಕವಲ್ಲದ ವಿಷಯಗಳಿಗೆ ಸಂಬಂಧಿಸಿವೆ. ಪುಸ್ತಕದ ಅಧ್ಯಯನಗಳು 1960ರ ದಶಕದಲ್ಲಿ ವಿದ್ಯಾರ್ಥಿಗಳು ಎತ್ತಿದ್ದ ಸೈದ್ಧಾಂತಿಕವಲ್ಲದ ಸಮಸ್ಯೆಗಳನ್ನು ಪರಿಶೀಲಿಸಿವೆ. ಇದರಲ್ಲಿ ಹೆಚ್ಚಿನ ಶುಲ್ಕಗಳು ಮತ್ತು ಕಳಪೆ ಹಾಸ್ಟೆಲ್ ಸೌಲಭ್ಯಗಳು ಸೇರಿವೆ. ಜೊತೆಗೆ ಸಂಗೀತ ಮತ್ತು ರಂಗಭೂಮಿಯಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಒಳಗೊಂಡಿವೆ.
ಈ ಪುಸ್ತಕ ಪ್ರಕಟವಾದ ಒಂದು ವರ್ಷದೊಳಗೆ, ವಿದ್ಯಾರ್ಥಿ ಚಳವಳಿಗಳು ಮತ್ತೆ ರಾಜಕೀಯಕ್ಕೆ ಮುಖ ಮಾಡಿದವು. 1969ರಲ್ಲಿ ಪ್ರಾರಂಭವಾದ ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದರು. ಆದರೆ ಇದು ಬಹಳ ಸಮಯದ ನಂತರ ಅಂತಿಮ ಫಲವನ್ನು ನೀಡಿತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ವಿದ್ಯಾರ್ಥಿಗಳನ್ನು ಬಲವಾಗಿ ಒಳಗೊಂಡ ಮೂರು ಪ್ರಾದೇಶಿಕ ಚಳವಳಿಗಳಲ್ಲಿ ಇದೂ ಒಂದಾಗಿತ್ತು. ಉಳಿದವೆಂದರೆ, 1970ರ ದಶಕದ ಅಂತ್ಯ/1980ರ ದಶಕದ ಆರಂಭದಲ್ಲಿ ನಡೆದ ಅಸ್ಸಾಂ ಚಳವಳಿ ಮತ್ತು 2000ರ ದಶಕದ ಉತ್ತರಾಖಂಡ ಚಳವಳಿ. ಅಸ್ಸಾಂ ಆಂದೋಲನದ ಬಗ್ಗೆ ಇತಿಹಾಸಕಾರ ಅರುಪ್ಜ್ಯೋತಿ ಸೈಕಿಯಾ ಬರೆದಿದ್ದಾರೆ. ಈ ಚಳವಳಿ ಹೆಚ್ಚಾಗಿ ವಿದ್ಯಾರ್ಥಿ ನಾಯಕರ ಕೈಯಲ್ಲಿತ್ತು. ಅವರ ಆದರ್ಶವಾದವು ಹೆಚ್ಚಿನ ಸಂಖ್ಯೆಯಲ್ಲಿ ಸ್ಫೂರ್ತಿ ನೀಡಿತು. ಅವರು ತಮ್ಮ ಉಗ್ರ ಭಾಷಣಗಳನ್ನು ಮಾಡಿದಾಗ, ಮಹಿಳೆಯರು ಮತ್ತು ಪುರುಷರು ಇಬ್ಬರೂ ಉತ್ಸಾಹದಿಂದ ಆಲಿಸಿದರು ಎಂದು ಬರೆಯುತ್ತಾರೆ. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಅಸ್ಸಾಂ ಗಣ ಪರಿಷತ್ಗೆ ಜನ್ಮ ನೀಡಿತು. ಅದು 1985ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತು. ಮೂರು ದಶಕಗಳ ನಂತರ ವಿದ್ಯಾರ್ಥಿಗಳು ತೆಲಂಗಾಣ ರಾಷ್ಟ್ರ ಸಮಿತಿಯು ಆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದರು.
ಈ ಎಲ್ಲಾ ಹೋರಾಟಗಳು ಪ್ರಸ್ತುತ ನಡೆಯುತ್ತಿರುವ ಚಳವಳಿಯ ಅಜ್ಞಾತ ಪೂರ್ವ ಇತಿಹಾಸವನ್ನು ರೂಪಿಸಿದವು. ಆದರೂ, ಹಿಂದಿನ ಅತ್ಯಂತ ಸ್ಪಷ್ಟವಾದ ಪೂರ್ವಗಾಮಿ ಎಂದರೆ 1970ರ ದಶಕದ ಮಧ್ಯಭಾಗದ ಜೆಪಿ ಚಳವಳಿ. ಇದರಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಘನಶ್ಯಾಮ್ ಶಾ ಅವರು ತಮ್ಮ Protest Movements in Two Indian States ಪುಸ್ತಕದಲ್ಲಿ ಗುಜರಾತ್ ಮತ್ತು ಬಿಹಾರದಲ್ಲಿ ನಡೆದ ಪ್ರತಿಭಟನೆಗಳ ಹಾದಿಯನ್ನು ಎಚ್ಚರಿಕೆಯಿಂದ ದಾಖಲಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದರು. ಗುಜರಾತ್ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಚಿಮನ್ಭಾಯಿ ಪಟೇಲ್ ಅವರನ್ನು ವ್ಯಾಪಕವಾಗಿ ಭ್ರಷ್ಟರೆಂದು ಪರಿಗಣಿಸಲಾಯಿತು. ಯುವಕರ ಕೋಪಕ್ಕೆ ಅವರು ಪ್ರಮುಖ ತುತ್ತಾಗಿದ್ದರು. ಚಿಮನ್ಭಾಯಿ ಅವರನ್ನು ರಕ್ಷಿಸಿದ್ದಕ್ಕಾಗಿ ಮತ್ತು ಬೆಲೆ ಏರಿಕೆಯನ್ನು ತಡೆಯಲು ಸಾಧ್ಯವಾಗದಿದ್ದಕ್ಕಾಗಿ ವಿದ್ಯಾರ್ಥಿಗಳು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ದಾಳಿ ಮಾಡಿದರು. ಪ್ರತಿಭಟನೆಗಳು ಯಾವುದೇ ರೀತಿಯಲ್ಲಿ ಅಹಿಂಸಾತ್ಮಕವಾಗಿರಲಿಲ್ಲ. ಸರಕಾರಿ ಆಸ್ತಿಯ ಮೇಲಿನ ದಾಳಿ ಮತ್ತು ಅಂಗಡಿಗಳ ಲೂಟಿ ನಡೆದಿದ್ದವು.
ಗುಜರಾತಿನಂತೆ, 1970ರ ದಶಕದಲ್ಲಿ ವಿದ್ಯಾರ್ಥಿಗಳು ಬಿಹಾರ ಚಳವಳಿಯ ಮುಂಚೂಣಿಯಲ್ಲಿದ್ದರು ಎಂದು ಶಾ ಬರೆಯುತ್ತಾರೆ. ಆದರೂ, ಗುಜರಾತ್ಗಿಂತ ಭಿನ್ನವಾಗಿ, ಬಿಹಾರದಲ್ಲಿ ಒಬ್ಬ ಹಿರಿಯ ವ್ಯಕ್ತಿ ಪ್ರಮುಖ ನಾಯಕತ್ವದ ಪಾತ್ರವನ್ನು ವಹಿಸಿದರು. ಅವರು ಜಯಪ್ರಕಾಶ್ ನಾರಾಯಣ್. ಶಾ ಗಮನಿಸಿದಂತೆ, ಬಡವರ ಬಗ್ಗೆ ಅವರ ಕಾಳಜಿ, ಅವರ ನೈತಿಕ ನಿಲುವು, ಅವರ ಸರಳತೆ ಮತ್ತು ನಮ್ರತೆ ಎಲ್ಲವೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ವರ್ಚಸ್ಸಿಗೆ ಕಾರಣವಾಗಿವೆ. ಪ್ರಜಾಪ್ರಭುತ್ವವನ್ನು ಉಳಿಸಲು ಒಂದು ವರ್ಷದ ಕಾಲ ಅಧ್ಯಯನವನ್ನು ತ್ಯಜಿಸುವಂತೆ ಜೆಪಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಅವರ ಕರೆಗೆ ಒಗ್ಗೂಡಿದ್ದ ವಿದ್ಯಾರ್ಥಿಗಳಲ್ಲಿ ಬಲಪಂಥೀಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಸೇರಿದ್ದರು. ಆದರೆ ಅನೇಕ ಯುವ ಸಮಾಜವಾದಿ ಕಾರ್ಯಕರ್ತರು ಕೂಡ ಇದ್ದರು.
ಪ್ರಸ್ತುತ ವಿದ್ಯಾರ್ಥಿಗಳ ದಂಗೆಯು ಒಂದು ಗಮನಾರ್ಹ ರೀತಿಯಲ್ಲಿ ಜೆಪಿ ಚಳವಳಿಯನ್ನು ಹೋಲುತ್ತದೆ. ಇವೆರಡರ ಪ್ರಮುಖ ಗುರಿಗಳು ಸರ್ವಾಧಿಕಾರತ್ವ ಮತ್ತು ವ್ಯಕ್ತಿತ್ವದ ಆರಾಧನೆ. ಇವನ್ನು 1970ರ ದಶಕದಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪಕ್ಷ ಪ್ರತಿನಿಧಿಸಿದ್ದರೆ, ಈಗ ನರೇಂದ್ರ ಮೋದಿ ಮತ್ತು ಅವರ ಪಕ್ಷ ಇವನ್ನು ಪ್ರತಿನಿಧಿಸುತ್ತಿದೆ. ಆದರೂ ಪ್ರಮುಖ ವ್ಯತ್ಯಾಸಗಳಿವೆ. ಆಗ ಎಬಿವಿಪಿ ಆಡಳಿತದ ವಿರುದ್ಧವಾಗಿತ್ತು; ಈಗ ಅದು ಆಡಳಿತದ ಪರವಾಗಿ ದೃಢವಾಗಿದೆ. ಜೆಪಿ ಚಳವಳಿಗೆ ಹೋಲಿಸಿದರೆ, ಪ್ರಸ್ತುತ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಗೋಚರಿಸುತ್ತಿದ್ದರು. ಅವರ ಆದರ್ಶವಾದ ಮತ್ತು ಧೈರ್ಯವು 1942ರ ಮಹಿಳಾ ಸತ್ಯಾಗ್ರಹಿಗಳನ್ನು ನೆನಪಿಸುತ್ತದೆ ಎಂದು ತೋರುತ್ತದೆ.
1970ರ ದಶಕದ ದಂಗೆಯು ತನ್ನನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸಿಕೊಂಡಿತು. ಮೊದಲನೆಯ ವಿಫಲ ಭರವಸೆಗಳನ್ನು ಅಂತಿಮವಾಗಿ ಪೂರೈಸಲು ಅದು ಕೆಲಸ ಮಾಡಿತು. ಏಕಪಕ್ಷೀಯ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವದ ಹೊಸ ಗಾಳಿಯನ್ನು ತರಲು ಸಹಾಯ ಮಾಡುವಲ್ಲಿ ಚಳವಳಿ ಯಶಸ್ವಿಯಾಯಿತು. ಮತ್ತೊಂದೆಡೆ, ಜೆಪಿ ಚಳವಳಿಯು ಹಿಂದುತ್ವದ ಶಕ್ತಿಗಳಿಗೆ ನ್ಯಾಯಸಮ್ಮತತೆಯನ್ನು ನೀಡಿತು. ಅದು ನಂತರದ ವರ್ಷಗಳಲ್ಲಿ ಸ್ಥಿರವಾಗಿ ಅಧಿಕಾರ ಮತ್ತು ಪ್ರಭಾವವನ್ನು ಗಳಿಸಿದೆ. ಪ್ರಶಂಸೆಗೆ ಅರ್ಹವೆಂದರೆ, ಇಂದಿನ ವಿದ್ಯಾರ್ಥಿ ನಾಯಕರು ಸರ್ವಾಧಿಕಾರ ಮತ್ತು ಧಾರ್ಮಿಕ ಮತಾಂಧತೆ ಎರಡನ್ನೂ ದೃಢವಾಗಿ ವಿರೋಧಿಸುತ್ತಾರೆ. ಅಂಬೇಡ್ಕರ್, ಗಾಂಧಿ ಮತ್ತು ನೆಹರೂ ಅವರೆಲ್ಲರ ಆಹ್ವಾಹನೆಯೊಂದಿಗೆ ಅವರು ತಮ್ಮ ಚಳವಳಿಯನ್ನು ಮೂರನೇ ಸ್ವಾತಂತ್ರ್ಯ ಹೋರಾಟವೆಂದು ನೋಡುತ್ತಾರೆ, ಮೊದಲ ಮತ್ತು ಎರಡನೆಯ ವಿಫಲ ಭರವಸೆಗಳನ್ನು ಅಂತಿಮವಾಗಿ ಪೂರೈಸಲು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಈ ಆದರ್ಶಗಳು ಮುಂದಿನ ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತವೆ ಎಂಬುದು ಲೆಕ್ಕವಿಲ್ಲದಷ್ಟು ವ್ಯಕ್ತಿಗಳು ಮತ್ತು ಸಂಸ್ಥೆಗಳ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಅವರಲ್ಲಿ ಅನೇಕರು ಜೂನ್ ಮತ್ತು ಜುಲೈ ತಿಂಗಳ ಆ ಬಿರುಸಿನ ದಿನಗಳಲ್ಲಿ ಜಂತರ್ ಮಂತರ್ನಲ್ಲಿ ಇರದೇ ಇದ್ದವರಾಗಿರುತ್ತಾರೆ.






