ಜೀವಪ್ರೀತಿ ಧ್ಯಾನಿಸುವ ಕವಿತೆಗಳು

ಸಮಾಜದಲ್ಲಿನ ಆತಂಕ, ಒತ್ತಿಟ್ಟ ನೋವು, ವ್ಯವಸ್ಥೆಯ ಕ್ರೌರ್ಯ, ಜಾತಿ ಮತ ಪಂಥಗಳ ಮೇಲಾಟ, ಹೆಣ್ಣಿನ ಅಸಹಾಯಕತೆ, ಆತಂಕಗಳನ್ನು ಮಹಾದೇವ ಬಸರಕೋಡ ಗಂಭೀರವಾಗಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತ ಅದಕ್ಕೆ ತಕ್ಕುದಾದ ಅಭಿವ್ಯಕ್ತಿಯನ್ನು ತಮ್ಮ ಕಾವ್ಯದಲ್ಲಿ ಹೊಸ ರೀತಿಯಲ್ಲಿ ಕಂಡುಕೊಳ್ಳುವುದನ್ನು ಅವರ ‘ಬತ್ತುವುದಿಲ್ಲ ಜೀವದೊಲವು’ ಸಾಕ್ಷೀಕರಿಸುತ್ತದೆ. ಜೀವನ ಪ್ರೀತಿ ಮತ್ತು ತಾತ್ವಿಕ ನೆಲೆಗಳನ್ನು ಅತ್ಯಂತ ನಿಖರವಾಗಿ ನಿರೂಪಿಸುವ ಕೃತಿ ಇದಾಗಿದೆ ಎನ್ನುವುದು ಅತಿಶಯೋಕ್ತಿಯೇನಲ್ಲ. ಎಲ್ಲ ಅಡೆತಡೆಗಳನ್ನು ದಾಟಿ ಮನಸ್ಸನ್ನು ಚಲನಶೀಲವಾಗಿರಿಸಲು ಕನಸುಗಳ ಆಸರೆ ಬೇಕು, ಸಾಮಾಜಿಕವಾಗಿ ಎದುರಾಗುವ ಅಮಾನವೀಯ ಸವಾಲುಗಳ ನಡುವೆಯೂ ಜೀವ ಪ್ರೀತಿಯನ್ನು ಉಳಿಸಿಕೊಳ್ಳುವ ಉಮೇದು ಇರಬೇಕು ಎನ್ನುವ ಆಶಾವಾದದ ಹಿನ್ನೆಲೆಯಲ್ಲಿ ಇಲ್ಲಿನ ‘ಮುಸುಕು ಸರಿಸೋಣ’, ‘ಕಾಯುತ್ತಲಿರುವೆ’, ‘ಬದುಕನರಳಿಸು ಬೆಂಕಿಯೇ’ ಎನ್ನುವ ಹಲವು ಕವನಗಳು ಅಂತರಂಗದ ಜೀವತಂತುಗಳನ್ನು ಮೀಟುತ್ತವೆ. ಸಿದ್ಧ ಮಾದರಿಯ ಪಡಿಯಚ್ಚಿಗೆ ಹೊರತಾಗಿ ಪ್ರಯೋಗಶೀಲವಾಗಿ ‘ಅಶ್ವಮೇಧದ ಕುದುರೆಗೆ ಲಗಾಮು’, ‘ಸಣ್ಣತನ’, ‘ಕ್ಷಮೆ ಇರಲಿ’ ಕವನಗಳು ನಾವಿನ್ಯತೆಗಾಗಿ ತುಡಿಯುವಿಕೆಗೆ ಉತ್ತಮ ನಿದರ್ಶನವಾಗಿವೆ. ಬೆಳಕು ನೀಡುವ ಸೂರ್ಯ, ಬೆಳದಿಂಗಳ ಕಾಂತಿ ಕೊಡುವ ಚಂದ್ರ, ಮುಳ್ಳಿನ ನಡುವೆಯೇ ಅರಳುವ ಗುಲಾಬಿ ಚಿತ್ರಗಳನ್ನು ಕಟ್ಟಿಕೊಡುತ್ತ ಸವಾಲುಗಳ ನಡುವೆಯೂ ಬದುಕು ನೀಡಿದ್ದನ್ನು ಬಾಚಿಕೊಳ್ಳುವ ಛಲಗಾರಿಕೆ ರೂಢಿಸಿಕೊಳ್ಳುವಂತೆ ಒತ್ತಾಯಿಸುತ್ತವೆ. ಯಾವುದೇ ಬಗೆಯ ಅತಿರೇಕವಿಲ್ಲದೆ ಸಂಯಮದಿಂದ ವಾಸ್ತವತೆಯನ್ನು ಮನಗಾಣಿಸಿಕೊಡಲು ಇಲ್ಲಿಯ ಕವನಗಳು ಸಮರ್ಥವಾಗಿವೆ.
ಇರುವ ಇರುಳ ಕೇಡನು ಕಳೆದು
ಅರಿವಿನ ದೀಪ ಮುಡಿಸುತ
ಒಳಬೆಳಕು ತೋರಿದವರು
ನಮ್ಮ ನೆಲದ ಶರಣರು..
ಶರಣ ಸಂಸ್ಕೃತಿಯಲ್ಲಿನ ವೈಯಕ್ತಿಕ ಮತ್ತು ಸಾಮಾಜಿಕ ಮೌಲ್ಯಗಳ ಸಹಚರ್ಯವನ್ನು ಎತ್ತಿ ತೋರಿಸುವಲ್ಲಿ ಈ ರೀತಿಯ ಇನ್ನು ಕೆಲವು ಕವಿತೆಗಳು ಈ ಕಾಲಘಟ್ಟಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಬಂಡಾಯಕ್ಕೆ ಸೀಮಿತವೆನಿಸದ, ಆದರೂ ಅದರ ತಿರುಳುಗಳನ್ನು ಸೌಮ್ಯವಾಗಿ ಪ್ರತಿಧ್ವನಿಸುತ್ತವೆ. ವಸ್ತು ಸತ್ಯವನ್ನು ಮೀರಿದ ಕಾವ್ಯ ಸತ್ಯವನ್ನು ಕಾಣಿಸುವಲ್ಲಿ ಕೆಲವು ಕವಿತೆಗಳು ಯಶಸ್ವಿಯಾಗಿವೆ. ಕವಿ ಮಹಾದೇವ ಬಸರಕೋಡರ ಪ್ರೌಢವಾದ ಚಿಂತನೆ ಹಾಗೂ ತಾತ್ವಿಕ ಜಿಜ್ಞಾಸೆ ಓದುಗರ ಮಾತ್ರವಲ್ಲದೆ ವಿಮರ್ಶಕರ ಮನಸ್ಸನ್ನು ಸೆಳೆದುಕೊಳ್ಳುವಲ್ಲಿ, ಬದುಕಿನ ಭರವಸೆಯನ್ನು ಕಳೆದುಕೊಳ್ಳದೆ ಮಾನವೀಯತೆಯನ್ನು ಧ್ಯಾನಿಸುವಲ್ಲಿ ‘ಬತ್ತುವುದಿಲ್ಲ ಜೀವದೊಲವು’ ಸಫಲವಾಗಿದೆ ಎನ್ನಬಹುದು.







