ಪಠ್ಯಪುಸ್ತಕ ಪರಿಷ್ಕರಣೆ ಎಂಬ ಕತ್ತರಿ ಪ್ರಯೋಗ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಅಗತ್ಯವಾದ ಪಠ್ಯಗಳನ್ನು ರೂಪಿಸುವುದು ಹಾಗೂ ಸಂಶೋಧನೆಗಳನ್ನು ಕೈಗೊಳ್ಳುವುದು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್ (ಎನ್ಸಿಇಆರ್ಟಿ) ನಿರ್ವಹಿಸಬೇಕಾದ ಬಹಳ ಮುಖ್ಯವಾದ ಕೆಲಸ. ಆದರೆ ಇದು ಮಾಡಬೇಕಾದ ಕೆಲಸವನ್ನು ಬಿಟ್ಟು ಮಾಡಬಾರದ ಕೆಲಸವನ್ನು ಮಾಡುತ್ತಿದೆ. ಬಿಜೆಪಿ ಸರಕಾರವಿದ್ದಾಗಲಂತೂ ಪಠ್ಯಪುಸ್ತಕಕ್ಕೆ ತನ್ನ ಮೂಗಿನ ನೇರಕ್ಕೆ ಕತ್ತರಿ ಪ್ರಯೋಗ ಮಾಡುತ್ತಲೇ ಬಂದಿದೆ. ಪ್ರಸಕ್ತ ವರ್ಷದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ದಿಲ್ಲಿಯ ಸುಲ್ತಾನರು ಮತ್ತು ಮೊಗಲರ ಕುರಿತ ಭಾಗವನ್ನು ಕೈ ಬಿಡಲಾಗಿದೆ. ಇವುಗಳ ಬದಲಾಗಿ ಭಾರತದ ಪ್ರಾಚೀನ ರಾಜ ವಂಶಗಳು ಹಾಗೂ ಮಹಾ ಕುಂಭಮೇಳ ಕುರಿತ ಮತ್ತು ಯಾತ್ರಾ ಸ್ಥಳಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ಇತಿಹಾಸ, ಭೂಗೋಳ ಶಾಸ್ತ್ರ, ಪೌರ ನೀತಿಗೆ ಸಂಬಂಧಿಸಿದಂತೆ ಇದ್ದ ಪ್ರತ್ಯೇಕ ಪಠ್ಯಪುಸ್ತಕಗಳನ್ನು ಬದಲಿಸಿ ಬೇರೆ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ.
ಪರಿಷ್ಕರಿಸಲಾದ ಹೊಸ ಪುಸ್ತಕದಲ್ಲಿ ಇತಿಹಾಸದ ಪಾಠ ಮೂರು ಮತ್ತು ಆರನೇ ಶತಮಾನದ ನಡುವಿನ ಗುಪ್ತರ ಕಾಲಕ್ಕೆ ಕೊನೆಗೊಳಿಸಲಾಗಿದೆ.ಇತಿಹಾಸಕ್ಕೆ ಸಂಬಂಧಿಸಿದ ಮೊದಲಿನ ಪಠ್ಯಪುಸ್ತಕ 7ನೇ ಶತಮಾನದ ನಂತರದ ವಿವರಗಳನ್ನು ಒಳಗೊಂಡಿತ್ತು. ಅದರಲ್ಲಿ ದಿಲ್ಲಿಯ ಸುಲ್ತಾನರು, ಮೊಗಲ ಆಡಳಿತಗಾರರು ಹಾಗೂ ಅವರ ಆಡಳಿತ ವ್ಯವಸ್ಥೆಯನ್ನು ಒಳಗೊಂಡಂತೆ ಮಧ್ಯಯುಗದ ಬಗ್ಗೆ ಸಾಕಷ್ಟು ವಿವರಗಳನ್ನು ಒಳಗೊಂಡಿತ್ತು. ಈಗ ಅದರ ಬದಲಿಗೆ ಭಾರತ ಮತ್ತು ಜಗತ್ತಿನ ಐದು ಅಂಶಗಳ ಬಗ್ಗೆ ವಿಶೇಷ ಗಮನವನ್ನು ಸೆಳೆಯಲಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಬಗ್ಗೆ, ಧಾರ್ಮಿಕ ಕ್ಷೇತ್ರಗಳ ಬಗ್ಗೆ ವಿಶೇಷ ಗಮನವನ್ನು ನೀಡಲಾಗಿದೆ. ಕುಂಭ ಮೇಳದ ಬಗ್ಗೆ ವಿಶೇಷ ವರ್ಣನೆ ಮಾಡಲಾಗಿದೆ. ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಮಹತ್ವದ ಕಾಲ ಘಟ್ಟವನ್ನು ಪಠ್ಯಪುಸ್ತಕದ ಮೊದಲ ಭಾಗದಲ್ಲಿ ಕೈ ಬಿಡಲಾಗಿದೆ. ಕೇಂದ್ರದ ಆಡಳಿತ ಪಕ್ಷದ ಸೈದ್ಧಾಂತಿಕ ನಿಲುವಿಗೆ ಪೂರಕವಾಗಿ ಬದಲಾವಣೆ ಮಾಡಲಾಗಿದೆ ಎಂಬುದು ಬರೀ ಟೀಕೆಯಲ್ಲ, ವಾಸ್ತವ ಸಂಗತಿಯಾಗಿದೆ.ಅಯೋಧ್ಯೆಯ ಬಾಬರಿ ಮಸೀದಿ ನೆಲಸಮ, ದಲಿತ ಮತ್ತು ನಕ್ಸಲ್ ಚಳವಳಿಗಳು, 2002ರ ಗುಜರಾತ್ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ವಿವರಗಳು ಇವುಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಆದರೂ ಪಠ್ಯಪುಸ್ತಕದ ಯಾವ ಭಾಗವನ್ನು ತೆಗೆದು ಹಾಕಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಒಟ್ಟಾರೆ ಇದರಲ್ಲಿ ಸಾಕಷ್ಟು ಗೊಂದಲಗಳಿವೆ.
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ ಕೆಲವು ರಾಜ್ಯಗಳಲ್ಲೂ ಸಮಸ್ಯೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗಲೂ ವಿವಾದದ ಅಲೆಯನ್ನು ಎಬ್ಬಿಸಿತ್ತು. ರೋಹಿತ್ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮೀತಿಯು ಪಠ್ಯಪುಸ್ತಕ ಗಳಲ್ಲಿ ಇದ್ದ ಬಸವಣ್ಣ, ನಾರಾಯಣ ಗುರು, ಪೆರಿಯಾರ್ ಅವರಂತಹ ಸಮಾಜ ಸುಧಾರಕರ ಬಗ್ಗೆ ಇದ್ದ ವಿವರಗಳನ್ನು ತೆಗೆದು ಹಾಕಿತ್ತು.
ಹಿಂದಿನ ಜನಸಂಘ, ಅಂದರೆ ಈಗಿನ ಬಿಜೆಪಿ ಅಧಿಕಾರ ರಾಜಕಾರಣವನ್ನು ಪ್ರಭಾವಿಯಾಗಿ ಪ್ರವೇಶಿಸಿದ ನಂತರ ತನ್ನ ಕೋಮುವಾದಿ ರಾಜಕಾರಣದ ಅನುಕೂಲಕ್ಕೆ ತಕ್ಕಂತೆ ಪಠ್ಯಪುಸ್ತಕ ಪರಿಷ್ಕರಣೆ ಎಂಬ ನಯವಾದ ಹೆಸರಿನಲ್ಲಿ ಮನ ಬಂದಂತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಲೇ ಬರಲಾಗಿದೆ. ವೈದಿಕಶಾಹಿಯ ಮೌಢ್ಯ, ಕಂದಾಚಾರಗಳ ವಿರುದ್ಧ ದನಿಯೆತ್ತಿದ ಇಸ್ಲಾಮ್ ಮಾತ್ರವಲ್ಲ, ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳ ಬಗೆಗೂ ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಸಾಕಷ್ಟು ಅವಾಂತರ ಮಾಡಲಾಗಿದೆ. ತಮ್ಮದು ಪ್ರತ್ಯೇಕ ಧರ್ಮ ಎಂದು ಈ ಧರ್ಮಾನುಯಾಯಿಗಳು ಪದೇ ಪದೇ ಹೇಳುತ್ತಿದ್ದರೂ ಇವುಗಳನ್ನು ಸನಾತನ ಧರ್ಮದ ಪಟ್ಟಿಗೆ ಬಲವಂತವಾಗಿ ಸೇರಿಸಿಕೊಳ್ಳುತ್ತಲೇ ಬರಲಾಗಿದೆ. ಕರ್ನಾಟಕದಲ್ಲೇ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗಲೂ ಇಂಥ ಅವಾಂತರ ನಡೆದಿತ್ತು.
ಕೇಂದ್ರ ಸರಕಾರ 1961ರಲ್ಲಿ ಸ್ಥಾಪನೆ ಮಾಡಿದ ಎನ್ಸಿಇಆರ್ಟಿಯನ್ನು ಆಡಳಿತ ನಡೆಸುವ ಪಕ್ಷಗಳು ಅದರಲ್ಲೂ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿವೆ ಎಂಬ ಆರೋಪ ಹೊಸದಲ್ಲ. 1977-79ರ ಕಾಲಾವಧಿಯಲ್ಲಿ ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಅಧಿಕಾರದಲ್ಲಿ ಇದ್ದಾಗ ಹಾಗೂ 2002ರಲ್ಲಿ ಎನ್ಡಿಎ ಸರಕಾರವಿದ್ದಾಗ ಪಠ್ಯಪುಸ್ತಕ ಪರಿಷ್ಕರಣೆ ಎಂಬುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆಗ ಜನತಾಪಕ್ಷದಲ್ಲಿದ್ದ ಮಧುಲಿಮಯೆ ಅವರಂಥ ಸಮಾಜವಾದಿಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. 2014ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ, ಅಂದರೆ ಎನ್ಡಿಎ ಸರಕಾರ ಬಂದಾಗಲೂ ಪಠ್ಯಪುಸ್ತಕಗಳನ್ನು ಐದು ಬಾರಿ ಪರಿಷ್ಕರಣೆ ಮಾಡಲಾಗಿತ್ತು. 12,11,10 ಹಾಗೂ 8ನೇ ಮತ್ತು 7ನೇ ತರಗತಿಯ ಪಠ್ಯಪುಸ್ತಕಗಳು ಸೇರಿದಂತೆ ಹಲವಾರು ತರಗತಿಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆಗೆ ಒಳಪಡಿಸಲಾಗಿದೆ. ಪ್ರತೀ ಬಾರಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗಲೂ ತೀವ್ರ ವಿವಾದ ಉಂಟಾಗಿದೆ. ಪ್ರತಿಪಕ್ಷ ಮುಖಂಡರು ಮಾತ್ರವಲ್ಲ ಶಿಕ್ಷಣ ಕ್ಷೇತ್ರದ ಪರಿಣಿತರು, ಇತಿಹಾಸ ತಜ್ಞರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ದೇಶದ ಇತಿಹಾಸವನ್ನು ತಿರುಚಿ ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಮರ್ಥಿಸುತ್ತಲೇ ಬಂದಿದೆ. ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ಅನುಕೂಲಕ್ಕಾಗಿ ಈ ರೀತಿ ಪಠ್ಯಪುಸ್ತಕಗಳನ್ನು ಬದಲಿಸುತ್ತ, ಪರಿಷ್ಕರಿಸುತ್ತಾ ಹೋದರೆ ವಿದ್ಯಾರ್ಥಿಗಳ ಮೇಲೆ ಎಂಥ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದರ ಅರಿವೂ ಇವರಿಗಿಲ್ಲ. ಪಠ್ಯಪುಸ್ತಕಗಳಲ್ಲಿ ಯಾವ ಪರಿಯಾಗಿ ಬದಲಾವಣೆ ಮಾಡಲಾಗಿದೆಯೆಂದರೆ ಬಾಬರಿ ಮಸೀದಿ ನೆಲಸಮಕ್ಕೆ ಸಂಬಂಧಿಸಿದ ಹಿಂದುತ್ವ ಕೋಮುವಾದಿ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದೆ. ಹರಪ್ಪ ನಾಗರಿಕತೆಯನ್ನು ಸಿಂಧೂ ಸರಸ್ವತಿ ನಾಗರಿಕತೆ ಎಂದು ಬದಲಿಸಲಾಗಿದೆ. ಗಾಂಧೀಜಿ ಹತ್ಯೆಯ ನಂತರ ಆರೆಸ್ಸೆಸ್ನ್ನು ನಿಷೇಧಿಸಲಾಗಿತ್ತು ಎಂಬುದನ್ನು ಕೈ ಬಿಡಲಾಗಿದೆ. ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಕುರಿತ ಉಲ್ಲೇಖದಲ್ಲಿ ‘ಬ್ರಾಹ್ಮಣ’ ಎಂಬ ಮಾಹಿತಿಯನ್ನು ತೆಗೆದು ಹಾಕಲಾಗಿದೆ. ಅಷ್ಟೇ ಅಲ್ಲ ಗೋಡ್ಸೆ ಹಿಂದೂ ತೀವ್ರಗಾಮಿ ಪತ್ರಿಕೆಯ ಸಂಪಾದಕ ಎನ್ನುವ ಅಂಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಪಠ್ಯಪುಸ್ತಕಗಳಲ್ಲಿದ್ದ ಜಾತಿ ವ್ಯವಸ್ಥೆ, ಪುರೋಹಿತಶಾಹಿ, ಶೂದ್ರರು, ಅಸ್ಪಶ್ಯತೆ ಕುರಿತಾದ ಅಂಶಗಳನ್ನು ಕೈ ಬಿಡಲಾಗಿದೆ.
ಈ ಪಠ್ಯಪುಸ್ತಕ ಪುಸ್ತಕ ಪರಿಷ್ಕರಣೆ ಎಂಬುದು ಸ್ವತಂತ್ರ ಭಾರತದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಅಂಶಗಳನ್ನು ಮುಂದಿನ ಪೀಳಿಗೆಯ ಮೆದುಳಲ್ಲಿ ತುರುಕಿ ಅಡ್ಡ ಹಾದಿ ಹಿಡಿಸುವುದಾಗಿದೆ. ಅವರವರ ನಿಲುವುಗಳು ಏನೇ ಇರಲಿ ನಡೆದು ಹೋದ ನೈಜ ಇತಿಹಾಸಕ್ಕೆ ಅಪಚಾರವಾಗಬಾರದು. ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆದು ಹಾಕಿದರೆ ಟಿಪ್ಪು ಇದ್ದುದು ಸುಳ್ಳಾಗುವುದಿಲ್ಲ. ಮೊಗಲರ ಪಾಠ ತೆಗೆದು ಹಾಕಿದರೆ ಮೊಗಲರು ಬಂದು ಆಡಳಿತ ನಡೆಸಿದ್ದು ಸುಳ್ಳಾಗುವದಿಲ್ಲ. ಬಾಬರಿ ಮಸೀದಿ ಧ್ವಂಸದ ಪಾಠ ತೆಗೆದು ಹಾಕಿದರೆ ಅದನ್ನು ನೆಲಸಮಗೊಳಿಸಿದವರು ನಿರಪರಾಧಿಗಳಾಗುವುದಿಲ್ಲ. ಇನ್ನು ಮುಂದಾದರೂ ಪಠ್ಯಪುಸ್ತಕದಲ್ಲಿ ಇತಿಹಾಸಕ್ಕೆ ಅಪಚಾರ ಮಾಡುವ ಹಾಗೂ ತಮ್ಮ ಕೋಮು ರಾಜಕೀಯಕ್ಕೆ ಶಿಕ್ಷಣ ಕ್ಷೇತ್ರವನ್ನು ಬಳಸಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ನೀಡಬಾರದು.