ಬೆಂಗಳೂರು | ಮಹಿಳೆಯರಿಗೆ ವಂಚನೆ : ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಗಳಲ್ಲಿ ನಕಲಿ ಖಾತೆಗಳ ತೆರೆದು ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಇಲ್ಲಿನ ರೈಲ್ವೇ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ನರೇಶ್ ಪೂಜಾರಿ ಗೋಸ್ವಾಮಿ(45) ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಚಿಕ್ಕಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಯುವಕರ ಫೋಟೊಗಳನ್ನು ಬಳಸಿಕೊಂಡು ಮ್ಯಾಟ್ರಿ ಮೋನಿಯಲ್ ವೆಬ್ಸೈಟ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸುತ್ತಿದ್ದ ಈತ ತನ್ನನ್ನು ಕಸ್ಟಮ್ಸ್ ಅಧಿಕಾರಿ ಮತ್ತು ಸಾಫ್ಟ್ವೇರ್ ಇಂಜಿನಿಯರ್ ಎಂದು ಬಿಂಬಿಸಿಕೊಂಡು ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರು ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ ಈತ, ಮದುವೆ ಬಗ್ಗೆ ಮಾತನಾಡುವ ನೆಪದಲ್ಲಿ ಜ.14ರಂದು ಮಹಿಳೆಯ ಪೋಷಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ.
ಮನೆಗೆ ಕರೆತರಲು ಚಿಕ್ಕಪ್ಪನನ್ನು ಕಳುಹಿಸುವುದಾಗಿ ಹೇಳಿ ತಾನೇ ಚಿಕ್ಕಪ್ಪನ ಸೋಗಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದು ಮಹಿಳೆಯ ಪೋಷಕರನ್ನು ಭೇಟಿಯಾಗಿದ್ದ. ಬಳಿಕ ಪರ್ಸ್ ಮನೆಯಲ್ಲಿ ಮರೆತು ಬಂದಿರುವುದಾಗಿ ತಿಳಿಸಿ, ಸಂಬಂಧಿಕರಿಗೆ ರೈಲು ಟಿಕೆಟ್ ಮುಂಗಡ ಕಾಯ್ದಿರಿಸಬೇಕಿದೆ. ಮನೆಗೆ ಹೋದ ಬಳಿಕ ಹಣ ಕೊಡುವುದಾಗಿ ಹೇಳಿ ಆ ಮಹಿಳೆಯರ ಪೋಷಕರಿಂದ 10 ಸಾವಿರ ರೂ. ಹಣ ಪಡೆದು, ಬಳಿಕ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ರೈಲ್ವೇ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ರಾಜಸ್ಥಾನದ 56, ಉತ್ತರ ಪ್ರದೇಶದ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ಟದ 13, ಗುಜರಾತ್ 11, ತಮಿಳುನಾಡು 6, ಬಿಹಾರ ಮತ್ತು ಜಾರ್ಖಾಂಡ್ 6, ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಸೇರಿ ಒಟ್ಟು 250 ಮಂದಿ ಮಹಿಳೆಯರಿಗೆ ವಂಚಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ನಗರದ ರೈಲ್ವೆ ಡಿಐಜಿಪಿ ಡಾ.ಎಸ್.ಡಿ.ಶರಣಪ್ಪ ಮಾಹಿತಿ ನೀಡಿದ್ದಾರೆ.







