ಉತ್ತರಪ್ರದೇಶ: ಉಷ್ಣಮಾರುತಕ್ಕೆ ಸಾವನ್ನಪ್ಪಿದವರ ಸಂಖ್ಯೆ 54ಕ್ಕೇರಿಕೆ, 400 ಮಂದಿ ಆಸ್ಪತ್ರೆಗೆ
ಹೊಸದಿಲ್ಲಿ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 54 ಜನರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು 400 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿಗೆ ಬೇರೆ ಬೇರೆ ಕಾರಣಗಳಿದ್ದರೂ, ಉಷ್ಣಮಾರುತವೂ ಇದಕ್ಕೆ ಕಾರಣ ಇರಬಹುದು ಎಂದು ವೈದ್ಯರು ಹೇಳಿದ್ದಾರೆ
ಅತಿಯಾದ ತಾಪಮಾನದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು ಹೇಳಿದರು.
ತೀವ್ರವಾದ ಶಾಖದ ಅಲೆಯು ಉತ್ತರಪ್ರದೇಶವನ್ನು ಆವರಿಸಿದೆ, ಹೆಚ್ಚಿನ ಸ್ಥಳಗಳು 40 ಡಿಗ್ರಿ ತಾಪಮಾನವನ್ನು ಹೊಂದಿವೆ.
ಹಠಾತ್ ಸಾವುಗಳು ಹಾಗೂ ರೋಗಿಗಳು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಹೆಚ್ಚಾಗುತ್ತಿದೆ. ಇದು ಆಸ್ಪತ್ರೆಯ ಸಿಬ್ಬಂದಿಯನ್ನು ಎಚ್ಚರದಿಂದಿರುವಂತೆ ಮಾಡಿದೆ.
ಜೂನ್ 15 ರಂದು 23 ರೋಗಿಗಳು, ಮರುದಿನ 20 ರೋಗಿಗಳು ಮತ್ತು ನಿನ್ನೆ 11 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ಬಲ್ಲಿಯಾ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಎಸ್ಕೆ ಯಾದವ್ ತಿಳಿಸಿದ್ದಾರೆ.