ಟ್ರೋಲ್ ಗೆ ಗುರಿಯಾದ ‘ಭಾರತ ತೊರೆಯುವುದು ನನ್ನ ಕನಸು’ ಎಂಬ ವಿದ್ಯಾರ್ಥಿನಿಯ ಹೇಳಿಕೆ
ಕೆನಡಾದಲ್ಲಿರುವ ವಿದ್ಯಾರ್ಥಿನಿಗೆ ಉದ್ಯೋಗಾವಕಾಶದ ಆಮಂತ್ರಣ ನೀಡಿದ ಟ್ರೂಕಾಲರ್ ಸಿಇಒ
![ಟ್ರೋಲ್ ಗೆ ಗುರಿಯಾದ ‘ಭಾರತ ತೊರೆಯುವುದು ನನ್ನ ಕನಸು’ ಎಂಬ ವಿದ್ಯಾರ್ಥಿನಿಯ ಹೇಳಿಕೆ ಟ್ರೋಲ್ ಗೆ ಗುರಿಯಾದ ‘ಭಾರತ ತೊರೆಯುವುದು ನನ್ನ ಕನಸು’ ಎಂಬ ವಿದ್ಯಾರ್ಥಿನಿಯ ಹೇಳಿಕೆ](https://www.varthabharati.in/h-upload/2023/08/04/1177118-fb15.webp)
ಒಟ್ಟಾವಾ: ‘ಭಾರತ ತೊರೆಯುವುದು ನನ್ನ ಕನಸು’ ಎಂಬ ಭಾರತೀಯ ಮೂಲದ ವಿದ್ಯಾರ್ಥಿನಿಯ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗುರುವಾರದಂದು ಟ್ರೂಕಾಲರ್ ಸಿಇಒ ಅಲನ್ ಮಮೇದಿ ಅವರು ಆಕೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಕೆನಡಾದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ನನ್ನ ಪದವಿ ಮುಗಿದ ನಂತರ ನನ್ನ ಭವಿಷ್ಯದ ಯೋಜನೆಯು ವ್ಯಾಪಾರೋದ್ಯಮದಲ್ಲಿ ವೃತ್ತಿ ಜೀವನ ಆರಂಭಿಸುವುದನ್ನು ಒಳಗೊಂಡಿದೆ ಎಂದೂ ಏಕತಾ ಹೇಳಿದ್ದಳು. ಕೆನಡಾದ ಪ್ರಕೃತಿ ಸೊಬಗು ಹಾಗೂ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನು ನೋಡುವುದು ನನ್ನ ಅಚ್ಚುಮೆಚ್ಚಿನ ಸಂಗತಿಗಳಲ್ಲೊಂದು ಎಂದೂ ಆಕೆ ಆ ವಿಡಿಯೊದಲ್ಲಿ ಬಹಿರಂಗಪಡಿಸಿದ್ದಳು. ಆದರೆ, ತನ್ನ ತವರು ದೇಶದ ಕುರಿತು ಏಕತಾ ನೀಡಿದ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಆದರೆ, ಈ ಟ್ರೋಲ್ಗಳ ಕುರಿತು ತಲೆ ಕೆಡಿಸಿಕೊಳ್ಳಬೇಡ ಎಂದು ಆಕೆಯನ್ನು ಒತ್ತಾಯಿಸಿರುವ ಮಮೇದಿ, ಆಕೆಯ ಶಿಕ್ಷಣ ಪೂರ್ಣಗೊಂಡ ನಂತರ ವಿಶ್ವದ ಯಾವುದೇ ಭಾಗದಿಂದಲಾದರೂ ಉದ್ಯೋಗ ನಿರ್ವಹಿಸುವ ಅವಕಾಶದ ಆಹ್ವಾನವನ್ನು ತಮ್ಮ ಕಂಪನಿಯಿಂದ ಆಕೆಗೆ ನೀಡಿದ್ದಾರೆ. ಅಲ್ಲದೆ, ಆಕೆ ತನ್ನ ಕನಸನ್ನು ಪೂರೈಸಿಕೊಳ್ಳುವತ್ತ ಕೆಲಸ ಮಾಡುತ್ತಿರುವುದನ್ನು ಟೀಕಿಸುತ್ತಿರುವ ಜನರನ್ನು ಖಂಡಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, “ಜನರು ಆಕೆಯ ಬಗ್ಗೆ ವ್ಯಂಗ್ಯವಾಡಲು, ಆಕೆ ತಪ್ಪು ತಿಳಿವಳಿಕೆಗೆ ಒಳಗಾಗಬೇಕು ಎಂದು ಬಯಸುತ್ತಿದ್ದಾರೆ. ಇದು ಸರಿಯಲ್ಲ!! ಏಕತಾ, ಈ ಎಲ್ಲ ಕುರಿಗಳು ನಿನ್ನ ಕುರಿತು ಮಾಡುತ್ತಿರುವ ವ್ಯಂಗ್ಯವನ್ನು ಗಂಭೀರವಾಗಿ ಪರಿಗಣಿಸದಿರು. ನನ್ನ ಪ್ರಕಾರ, ನೀನು ಸಂಯಮದಿಂದಿದ್ದೀಯ ಹಾಗೂ ನಿನ್ನ ಕನಸನ್ನು ಜೀವಿಸುತ್ತಿದ್ದೀಯ! ನೀನು ನಿನ್ನ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ, ವಿಶ್ವದ ಯಾವುದೇ ಮೂಲೆಯಲ್ಲಿನ ಟ್ರೂಕಾಲರ್ ಕಚೇರಿಯಲ್ಲಿ ಕೆಲಸ ಮಾಡಲು ನಿನಗೆ ಆಹ್ವಾನ ನೀಡುತ್ತಿದ್ದೇನೆ” ಎಂದು ಭರವಸೆ ನೀಡಿದ್ದಾರೆ.
ಮಮೇದಿಯ ‘ಎಕ್ಸ್’ ಪೋಸ್ಟ್ ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಕೃಪಾಂಕವನ್ನು ಪಡೆಯುವ ಗಿಮಿಕ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ಇನ್ನೂ ಕೆಲವು ಬಳಕೆದಾರರು, ಅವರು ಅದ್ಭುತ ನಡವಳಿಕೆಯನ್ನು ಶ್ಲಾಘಿಸಿದ್ದಾರೆ. ಓರ್ವ ಬಳಕೆದಾರರು, “ವಾವ್! ಅದ್ಭುತ ನಡವಳಿಕೆ” ಎಂದು ಶ್ಲಾಘಿಸಿದ್ದಾರೆ.