ಪ್ರವಾಹ ಪರಿಹಾರ ಕಾರ್ಯಾಚರಣೆಯ ವೇಳೆ 35 ವರ್ಷಗಳ ನಂತರ ಒಂದಾದ ತಾಯಿ-ಮಗ!
![ಪ್ರವಾಹ ಪರಿಹಾರ ಕಾರ್ಯಾಚರಣೆಯ ವೇಳೆ 35 ವರ್ಷಗಳ ನಂತರ ಒಂದಾದ ತಾಯಿ-ಮಗ! ಪ್ರವಾಹ ಪರಿಹಾರ ಕಾರ್ಯಾಚರಣೆಯ ವೇಳೆ 35 ವರ್ಷಗಳ ನಂತರ ಒಂದಾದ ತಾಯಿ-ಮಗ!](https://www.varthabharati.in/h-upload/2023/07/28/1174023-reunion.gif)
Photo: Facebook
ಪಟಿಯಾಲಾ: ಪ್ರವಾಹ ಪರಿಹಾರ ಸ್ವಯಂಸೇವಕ ಜಗಜಿತ್ ಸಿಂಗ್ ಎಂಬವರು 35 ವರ್ಷಗಳ ನಂತರ ತನ್ನ ತಾಯಿಯನ್ನು ಭೇಟಿಯಾಗಿದ್ದಾರೆ ಎಂದು timesofindia.com ವರದಿ ಮಾಡಿದೆ.
ಜುಲೈ 20ರಂದು ಪಟಿಯಾಲಾದ ಗ್ರಾಮವೊಂದರಲ್ಲಿನ ತನ್ನ ತಾಯಿ ಹರ್ಜಿತ್ ಕೌರ್ ಅವರನ್ನು ಅವರ ತವರು ಮನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಜಗಜಿತ್ ಸಿಂಗ್ ಮುಖಾಮುಖಿ ಭೇಟಿ ಮಾಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿರುವ ಜಗಜಿತ್ ಸಿಂಗ್, ನಾನು ನನ್ನ ಭಾವನೆಗಳನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ಭಾವುಕವಾಗಿ ಹೇಳಿಕೊಂಡಿದ್ದಾರೆ.
ತಾಯಿ ಮತ್ತು ಪುತ್ರ ಪರಸ್ಪರ ಅಪ್ಪಿಕೊಂಡಾಗ ಅವರಿಬ್ಬರ ಕಣ್ಣಾಲಿಗಳು ತುಂಬಿ ಬಂದಿವೆ.
ತನ್ನ ತಂದೆ ಮೃತಪಟ್ಟಾಗ ಜಗಜಿತ್ ಕೇವಲ ಆರು ತಿಂಗಳ ಮಗುವಾಗಿದ್ದರು. ತಾಯಿ ಹರ್ಜಿತ್ ಮರುವಿವಾಹವಾದ ನಂತರ ಅವರ ತಂದೆಯ ಪೋಷಕರು ಅವರು ಎರಡು ವರ್ಷದ ಮಗುವಾಗಿದ್ದಾಗ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅವರು ಬೆಳೆದು ವಯಸ್ಕರಾದ ನಂತರ, ಅವರ ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರಿಗೆ ತಿಳಿಸಲಾಗಿತ್ತು.
ಪಟಿಯಾಲಾದಲ್ಲಿನ ಬೊಹ್ರಾಪುರ್ ಗ್ರಾಮದಲ್ಲಿ ತಾಯಿ ಮತ್ತು ಪುತ್ರ ಒಗ್ಗೂಡುವ ಅದೃಷ್ಟ ಒದಗಿ ಬಂದಿತು. ಕದಿಯಾನ್ನ ಮುಖ್ಯ ಗುರುದ್ವಾರದಲ್ಲಿ ಭಕ್ತಿ ಗೀತೆಗಳ ಗಾಯಕರಾಗಿರುವ ಜಗಜಿತ್ ಸಿಂಗ್, ಇತ್ತೀಚಿನ ಮಾನ್ಸೂನ್ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ತನ್ನ ಸರ್ಕಾರೇತರ ಸಂಸ್ಥೆಯೊಂದಿಗೆ ಪಟಿಯಾಲಾಗೆ ಬಂದಿಳಿದಿದ್ದರು.
"ನಾನು ಪಟಿಯಾಲಾದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿದ್ದಾಗ ನನ್ನ ಚಿಕ್ಕಮ್ಮ ನನ್ನ ತಾಯಿಯ ಪೋಷಕರ ಮನೆಯೂ ಪಟಿಯಾಲಾದಲ್ಲೇ ಇದೆ ಎಂದು ಹೇಳಿದ್ದರು. ನನ್ನ ತಾಯಿಯ ಪೋಷಕರು ಬಹುಶಃ ಬೊಹ್ರಾಪುರ್ ಗ್ರಾಮದಲ್ಲಿ ವಾಸಿಸುತ್ತಿರಬಹುದು ಎಂದು ನನ್ನ ಚಿಕ್ಕಮ್ಮ ನನಗೆ ಅಸ್ಪಷ್ಟವಾಗಿ ತಿಳಿಸಿದ್ದರು" ಎಂದು ಜಗಜಿತ್ ಹೇಳಿಕೊಂಡಿದ್ದಾರೆ.
ಕೂಡಲೇ ಬೊಹ್ರಾಪುರ್ ತಲುಪಿರುವ ಜಗಜಿತ್, ತನ್ನ ಅಜ್ಜಿ ಪ್ರೀತಂ ಕೌರ್ರನ್ನು ಭೇಟಿಯಾಗಿದ್ದಾರೆ. "ನಾನು ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದೆ. ಅದರಿಂದ ಆಕೆ ಆರಂಭದಲ್ಲಿ ಸಂದೇಹಕ್ಕೊಳಗಾದರೂ, ನಂತರ ಹರ್ಜಿತ್ ತನ್ನ ಪ್ರಥಮ ವಿವಾಹದಿಂದ ಓರ್ವ ಪುತ್ರನನ್ನು ಹೊಂದಿದ್ದಾರೆ ಎಂದು ತಿಳಿಸಿದರು. ನನ್ನ ದುಃಖದ ಕಟ್ಟೆ ಒಡೆಯಿತು. ನಾನೇ ನನ್ನ ತಾಯಿಯನ್ನು ಮೂರು ದಶಕಗಳಿಂದ ಕಾಣದ ನತದೃಷ್ಟ ಪುತ್ರ ಎಂದು ಆಕೆಗೆ ತಿಳಿಸಿದೆ" ಎಂದು ತಿಳಿಸಿದ್ದಾರೆ.
ಮೂಳೆ ಸಮಸ್ಯೆಯಿಂದ ಸರಿಯಾಗಿ ನಡೆಯಲಾಗದ ವಯೋವೃದ್ಧೆ ಹರ್ಜಿತ್ ಕೌರ್ ಅವರಿಗೆ ಆ ಸಮಸ್ಯೆಗಿಂತ ತನ್ನ ಪುತ್ರ ಮರಳಿ ದೊರೆತದ್ದೇ ದೊಡ್ಡ ಸಂತಸದ ವಿಷಯವಾಗಿತ್ತು. ಜಗಜಿತ್ ಸಿಂಗ್ 37 ವರ್ಷ ವಯೋಮಾನದವರಾಗಿದ್ದು, ತನ್ನ ಪತ್ನಿ, 14 ವರ್ಷದ ಪುತ್ರಿ ಹಾಗೂ 8 ವರ್ಷದ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ.
ತನ್ನ ತಾಯಿ ಜೀವಂತವಾಗಿದ್ದಾಳೆ ಎಂಬ ಸಂಗತಿ ಜಗಜಿತ್ ಅವರಿಗೆ ಕೇವಲ ಐದು ವರ್ಷಗಳ ಹಿಂದಷ್ಟೆ ತಿಳಿದು ಬಂದಿತ್ತು. "ನನ್ನ ತಾತ, ನನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಸೇರಿದಂತೆ ನನ್ನ ಎಲ್ಲ ಸಂಬಂಧಿಗಳು ತೀರಿ ಹೋಗಿದ್ದುದರಿಂದ ನನಗೆ ಆ ಕುರಿತು ಹೆಚ್ಚು ಮಾಹಿತಿ ತಿಳಿದಿರಲಿಲ್ಲ" ಎಂದು ಜಗಜಿತ್ ಹೇಳಿಕೊಂಡಿದ್ದಾರೆ.
"ನಾನು ನನ್ನ ಬಾಲ್ಯಕಾಲದ ಚಿತ್ರಗಳನ್ನು ನೋಡುವಾಗ ನಾನು ಓರ್ವ ಮಹಿಳೆಯನ್ನು ನೋಡಿದ್ದೆನಾದರೂ, ಆಕೆಯೇ ನನ್ನ ತಾಯಿ ಎಂದು ತಿಳಿದಿರಲಿಲ್ಲ. ನಾನು ಈ ಕುರಿತು ನನ್ನ ಅಜ್ಜನನ್ನು ಪ್ರಶ್ನಿಸುತ್ತಿದ್ದೆನಾದರೂ, ಅವರು ನನ್ನ ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು" ಎಂದು ಜಗಜಿತ್ ಸಿಂಗ್ ಸ್ಮರಿಸಿದ್ದಾರೆ.
"ನನ್ನ ತಾತ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದರು ಹಾಗೂ ಎರಡು ದಶಕಗಳ ಹಿಂದೆ ಹರಿಯಾಣದಿಂದ ಪಂಜಾಬ್ನ ಕದಿಯಾನ್ಗೆ ಸ್ಥಳಾಂತರಗೊಂಡಿದ್ದರು" ಎಂದು ಅವರು ನೆನಪು ಹಂಚಿಕೊಂಡಿದ್ದಾರೆ.