ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ : ಕೆ.ಎನ್.ರಾಜಣ್ಣ

ತುಮಕೂರು : ರಾಷ್ಟ್ರೀಯ ಪಕ್ಷದಲ್ಲಿ ಯಾವತ್ತೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್ ಆಗಿರುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅದು ಕಾಂಗ್ರೆಸ್ ಅಥವಾ ಬಿಜೆಪಿ ಇರಬಹುದು. ಹೈಕಮಾಂಡ್ನದ್ದೇ ಅಂತಿಮ ತೀರ್ಮಾನ. ಮುಖ್ಯಮಂತ್ರಿ ಮುಂದುವರೆಯಬೇಕೆಂಬುದು ನಮ್ಮ ಆಸೆ, ಅದರಲ್ಲಿ ತಪ್ಪೇನಿದೆ. ಆಸೆ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇರಬಹುದು, ಎಲ್ಲವೂ ಅಷ್ಟೇ ಎಂದರು.
ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಇದೇ ರೀತಿ ಪರಿಸ್ಥಿತಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆಯೇ ಆಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು ಇದ್ದಾರೆ. ಸೋನಿಯಾ ಗಾಂಧಿ ರೀತಿ ಪ್ರಧಾನ ಮಂತ್ರಿ ಸ್ಥಾನ ಬೇಡ ಎಂದು ಹೇಳಿದವರಿದ್ದಾರೆ. ಇದು ಕಾಂಗ್ರೆಸ್ ಇತಿಹಾಸ ಎಂದು ಹೇಳಿದರು.
ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧ ಕುರಿತ ಸರಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿರುವ ಬಗ್ಗೆ ಮಾತನಾಡಿ, ಹೈಕೋರ್ಟ್ನಲ್ಲಿ ತೀರ್ಮಾನ ಆದ ಮೇಲೆ ಪ್ರಶ್ನೆ ಇಲ್ಲ. ಸಾರ್ವಜನಿಕವಾಗಿ ಟೀಕೆ ಮಾಡಲು ಸಾಧ್ಯವಿಲ್ಲ. ಸರಕಾರ ಈ ಸಂಬಂಧ ಹೈಯರ್ ಕೋರ್ಟ್ನಲ್ಲಿ ಅಪೀಲು ಸಲ್ಲಿಸಬಹುದು. ರಾಜ್ಯಸರಕಾರದ ತೀರ್ಮಾನಗಳಿಗೂ ಕೆಲವೊಂದು ಬಾರಿ ಈ ರೀತಿ ಆಗಲಿದೆ. ಹಾಗಂತ ಇದು ಸರಕಾರಕ್ಕೆ ಹಿನ್ನಡೆ ಅಂತ ಅಲ್ಲ ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಬಾಧಿತ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಇತ್ತೀಚಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.







