ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ | 2027ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ : ವಿ.ಸೋಮಣ್ಣ

ದಾವಣಗೆರೆ : ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ 2027 ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗಾಗಿ ಈಗಾಗಲೇ ಶೇ.85ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಉಳಿದ ಶೇ.15ರಷ್ಟು ಭೂಸ್ವಾಧೀನ ಶೀಘ್ರವೇ ಮುಗಿಸುವ ಕುರಿತು ಮತ್ತು ತ್ವರಿತವಾಗಿ ಕಾಮಗಾರಿ ನಡೆಸುವ ಸಂಬಂಧ ಮೇ 17ರಂದು ಚಿತ್ರದುರ್ಗದಲ್ಲಿ ಸಭೆ ಕರೆಯಲಾಗಿದ್ದು, ಸಂಸದ ಗೋವಿಂದ ಕಾರಜೋಳ ಮತ್ತು ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನೇರ ರೈಲು ಮಾರ್ಗ ಯೋಜನೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ ಅವರ ಕನಸಿನ ಕೂಸಾಗಿದ್ದು, ಶೀಘ್ರವೇ ಇದನ್ನೂ ಪೂರ್ಣಗೊಳಿಸಲಾಗುವುದು. 2027 ಡಿಸೆಂಬರ್ ಒಳಗೆ ರಾಯದುರ್ಗ-ತುಮಕೂರು 207 ಕಿ.ಮೀ., ತುಮಕೂರು-ದಾವಣಗೆರೆ 192 ಕಿ.ಮೀ. ರೈಲು ಮಾರ್ಗಗಳು ಲೋಕಾರ್ಪಣೆಗೊಳ್ಳಲಿವೆ. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಎರಡೂ ಯೋಜನೆಗಳನ್ನು ಉದ್ಘಾಟಿಸುವ ಉದ್ದೇಶ ಹೊಂದಲಾಗಿದೆ ಎಂದರು.
ರೈಲ್ವೆ ಇಲಾಖೆ ಜಾಗದಲ್ಲಿ ಇನ್ನು ಮುಂದೆ ನಡೆಯುವ ಎಲ್ಲ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ಕೇಂದ್ರ ಸರಕಾರದ ಅನುದಾನದಲ್ಲಿಯೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ತುಮಕೂರು ಕ್ಷೇತ್ರದಲ್ಲಿ 23 ಮೇಲು- ಕೆಳ ಸೇತುವೆಗಳ ಇದ್ದವು. ಒಂದು ಬಿಟ್ಟು ಹೋಗಿತ್ತು. ಇದೀಗ ಅದರ ಕಾಮಗಾರಿಯೂ ಆರಂಭಗೊಂಡಿದ್ದು, ಒಟ್ಟಾರೆ 900 ಕೋಟಿ ರೂ. ಮೊತ್ತದ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಗಳು ಬರದಿಂದ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಶೇ.50:50 ಅನುದಾನದಡಿ ಆರಂಭಗೊಂಡಿತ್ತು. ನಂತರ ಭೂಮಿ ಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲವೂ ಬಗೆಹರಿದಿದ್ದು, ಅಂತಿಮವಾಗಿ 2027 ಡಿಸೆಂಬರ್ ವೇಳೆಗೆ ಉದ್ಘಾಟನೆಗೊಳ್ಳಲಿವೆ ಎಂದರು.
ಲೆವೆಲ್ ಕ್ರಾಸಿಂಗ್ ತಲೆನೋವಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹಂತಹಂತವಾಗಿ ರಾಜ್ಯದ ಎಲ್ಲ ಲೆವೆಲ್ ಕ್ರಾಸಿಂಗ್ಗಳಿಗೆ ಮುಕ್ತಿ ನೀಡುವ ಕೆಲಸ ಮಾಡಲಾಗುವುದು ಎಂದ ಸೋಮಣ್ಣ, ಹರಿಹರ ರೈಲು ನಿಲ್ದಾಣ ಅಭಿವೃದ್ಧಿಗೆ ಈಗಾಗಲೇ 24 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ರೈಲು ಅಪಘಾತಗಳನ್ನು ತಡೆಯುವ ಸಲುವಾಗಿ ‘ಕವಚ್’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಂದು ವೇಳೆ ಎರಡು ರೈಲುಗಳ ಒಂದೇ ಹಳಿಯ ಮೇಲೆ ಬಂದರೂ ರೈಲುಗಳು ಎಷ್ಟೇ ವೇಗವಾಗಿ ಇದ್ದರೂ ಕನಿಷ್ಠ 50 ಮೀಟರ್ ಒಳಗೆ ರೈಲುಗಳ ವೇಗ ತಗ್ಗಿಸಿ ಅಪಘಾತವಾಗದಂತೆ ತಡೆಯುವ ಪ್ರಯೋಗ ನಡೆಯುತ್ತಿದೆ. ಕರ್ನಾಟಕದಲ್ಲಿ 2 ಸಾವಿರ ಕಿ.ಮೀ.ವರೆಗೂ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ಕೆಲಸ ಆರಂಭಗೊಂಡಿದೆ. ಭವಿಷ್ಯದಲ್ಲಿ ರೈಲು ಅಪಘಾತ ತಡೆಯುವಲ್ಲಿ ಕವಚ್ ಪರಿಣಾಮಕಾರಿಯಾಗಲಿದೆ ಎಂದು ನುಡಿದರು.
ಭಾರತ ನಡೆಸಿರುವ ದಾಳಿ ಶ್ಲಾಘನೀಯ :
ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ತಾಣಗಳ ಮೇಲೆ ಭಾರತ ನಡೆಸಿರುವ ದಾಳಿ ಶ್ಲಾಘನೀಯ. ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟಾದರೆ ಯಾವುದೇ ಕಾರಣಕ್ಕೂ ದೇಶ ಸುಮ್ಮನೆ ಕೂರುವುದಿಲ್ಲ ಎನ್ನುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ,ಶಾಸಕ ಬಿ.ಪಿ.ಹರೀಶ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಎನ್.ಎಂ.ಮುರುಗೇಶ್ ಆರಾಧ್ಯ, ವೀರೇಶ್ ಹನಗವಾಡಿ, ಶ್ರೀನಿವಾಸ್ ದಾಸಕರಿಯಪ್ಪ, ಇತರರು ಉಪಸ್ಥಿತರಿದ್ದರು.