ಡಿಸಿಎಂ ಡಿಕೆಶಿ ಬಳಿಕ ಆರೆಸ್ಸೆಸ್ ಗೀತೆಯನ್ನು ಹೊಗಳಿದ ಕಾಂಗ್ರೆಸ್ ಶಾಸಕ ಎಚ್.ಡಿ.ರಂಗನಾಥ್

ಎಚ್.ಡಿ.ರಂಗನಾಥ್
ತುಮಕೂರು : ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕಮಾರ್ ಅವರು ಆರೆಸ್ಸೆಸ್ ಗೀತೆಯನ್ನು ಸದನದಲ್ಲಿ ಹಾಡಿ ಪಕ್ಷದ ನಾಯಕರಿಗೆ ಮುಜುಗರವನ್ನು ಉಂಟು ಮಾಡಿರುವ ಬೆನ್ನಲ್ಲೇ, ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎಚ್.ಡಿ.ರಂಗನಾಥ್, ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವ ಬರದಲ್ಲಿ ಆರೆಸ್ಸೆಸ್ ಗೀತೆಯನ್ನು ಹಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಗೀತೆಯ ಅರ್ಥ ಚೆನ್ನಾಗಿದೆ. ನಮ್ಮನ್ನು ಪೊರೆವ ಭೂಮಿ ತಾಯಿ ಸದಾ ಗೌರವಕ್ಕೆ ಆರ್ಹಳು ಎಂಬ ಅರ್ಥವಿದೆ. ಗೀತೆಯು ಚನ್ನಾಗಿದೆ, ಹಾಗೆಂದ ಮಾತ್ರಕ್ಕೆ ನಾವು ಬಲಪಂಥೀಯ ಧೋರಣೆಗಳನ್ನು ಬೆಂಬಲಿಸುವ ಉದ್ದೇಶವಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೂ, ಬಿಜೆಪಿ ಸಿದ್ದಾಂತಕ್ಕೂ ಅಜಗಜಾಂತರ ವೆತ್ಯಾಸವಿದೆ. ಅವರ ಕೋಮುವಾದ, ಜಾತಿ ಧರ್ಮದ ಹೆಸರಿನಲ್ಲಿ ನಡೆಸುವ ವಿಘಟನೆಯನ್ನು ವಿರೋಧಿಸುತ್ತೇನೆ ಎಂದರು
ʼಧರ್ಮಸ್ಥಳʼ ಅತಿ ಹೆಚ್ಚು ಕಾಂಗ್ರೆಸ್ ಶಾಸಕರೇ ಅಲ್ಲಿಯ ಭಕ್ತರು :
ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರ. ವಿಶೇಷವಾಗಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರೇ ಅಲ್ಲಿಯ ಭಕ್ತರು. ಬಿಜೆಪಿಯವರು ಇಲ್ಲಿವರೆಗೂ ಯಾರೂ ಮಾತಾಡಿರಲಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಇರಬಹುದು ಎಂದು ಸದನದಲ್ಲಿ ಡಿಕೆಶಿ ಅವರು ಹೇಳಿದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದ್ದಾರೆ. ಎಸ್.ಐ.ಟಿ. ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ತನಿಖೆ ಪೂರ್ಣಗೊಳ್ಳುವವರೆಗೂ ಈ ವಿಚಾರದಲ್ಲಿ ಪತ್ರಿಕ್ರಿಯೆ ನೀಡುವುದಿಲ್ಲ. ಇದು ಸೂಕ್ಷ್ಮ ವಿಚಾರ ಎಂದರು.







