ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲ : ಡಿಸಿಎಂ ಜಿ.ಪರಮೇಶ್ವರ್

ಡಿಸಿಎಂ ಜಿ.ಪರಮೇಶ್ವರ್
ತುಮಕೂರು : ಚುನಾವಣಾ ಆಯೋಗದ ಸೂಚನೆಯಂತೆ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಚುನಾವಣಾ ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರಿಗಳೇನಾದರೂ ತಪ್ಪು ಮಾಡಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ರಾಜ್ಯ ಸರಕಾರ ಇದರಲ್ಲಿ ನೇರ ಭಾಗಿ ಅಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಎಸ್ಐಆರ್ಗೆ ಸಂಬಂಧಿಸಿ ಸರಕಾರವು ಯಾವುದೇ ಸೂಚನೆಗಳನ್ನು ಕೊಟ್ಟಿಲ್ಲ. ಚುನಾವಣಾ ಆಯೋಗ ಕೇಳಿದ ಸಿಬ್ಬಂದಿಯನ್ನು ಮಾತ್ರ ನಾವು ಕೊಟ್ಟಿದ್ದೇವೆ. ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರಂ ವಿತರಿಸಿ, ಅದನ್ನು ಮರಳಿ ಸಂಗ್ರಹಿಸುವ ಜವಾಬ್ದಾರಿ ಬಿಎಲ್ಒಗಳದ್ದೇ ಆಗಿದೆ. ಒಂದು ವೇಳೆ ಬಿಎಲ್ಒಗಳು ಒಂದೇ ಸ್ಥಳದಲ್ಲಿ ಕುಳಿತು ಫಾರಂ ವಿತರಿಸುತ್ತಿದ್ದರೆ, ಅದು ಅವರ ತಪ್ಪು. ಅಂತಹ ಘಟನೆಗಳು ಕಂಡುಬಂದರೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದನ್ನು ಬಿಜೆಪಿಯವರು ಸೂಕ್ಷ್ಮವಾಗಿ ಪರಿಶೀಲಿಸಲಿ ಎಂದು ಹೇಳಿದರು.
ಕೆಲವು ಎಂಎಲ್ಎಗಳು ಎನ್ಯೂಮರೇಷನ್ ಫಾರಂನಲ್ಲಿ ತಮ್ಮ ಭಾವಚಿತ್ರಗಳನ್ನು ಅಂಟಿಸಿಕೊಡುತ್ತಿರುವುದು ಕಂಡುಬರುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇದನೆಲ್ಲಾ ಬಿಎಲ್ಒಗಳು ನೋಡಿಕೊಳ್ಳಬೇಕು. ಎನ್ಯೂಮರೇಷನ್ ಫಾರಂ ಅನ್ನು ಸ್ವತಃ ಬಿಎಲ್ಒಗಳೇ ಮನೆ ಮನೆಗೆ ಹೋಗಿ ಕೊಡಬೇಕು. ಆ ಕೆಲಸವನ್ನು ಅವರು ಸರಿಯಾಗಿ ಮಾಡಿಲ್ಲ ಎಂದಾದರೇ ಎಲೆಕ್ಷನ್ ಕಮಿಷನ್ನವರು ನೋಡಿಕೊಳ್ಳುತ್ತಾರೆ. ಇದರಲ್ಲಿ ನಮ್ಮ ಸರಕಾರದ ಪಾತ್ರ ಎಳ್ಳಷ್ಟು ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯ ಸರಕಾರವನ್ನು ಕೇಳಿ ಅವರು ನಿಯಮಗಳನ್ನು ಮಾಡಿಲ್ಲ. ಒಂದು ತಿಂಗಳೊಳಗೆ ಎಸ್ಐಆರ್ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ಚುನಾವಣಾ ಆಯೋಗ ತೀರ್ಮಾನ ಮಾಡಿದೆ. ಅದರಂತೆ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಸಹಕಾರವನ್ನು ಮಾತ್ರ ರಾಜ್ಯ ಸರಕಾರ ನೀಡುತ್ತಿದೆ ಎಂದು ತಿಳಿಸಿದರು.
ಶೀಘ್ರವಾಗಿ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬುರಗಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮುಂದಿನ ದಿನದಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯ ರದ್ದತಿಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈ ಯೋಜನೆಗಾಗಿ 900 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಈಗಾಗಲೇ ಕಾಮಗಾರಿಗಾಗಿ ಒಂದಿಷ್ಟು ಹಣವನ್ನು ವ್ಯಯಿಸಲಾಗಿದೆ.. ಅದನ್ನು ಈಗ ನಿಲ್ಲಿಸಬೇಕು ಎಂದು ಹೇಳಿದರೆ ಅದು ಅಸಾಧ್ಯ. ಅದನ್ನು ಮುಂದುವರೆಸಲಾಗುವುದು ಎಂದರು.






