ಜಿ.ಪರಮೇಶ್ವರ್ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತಹ ಧೈರ್ಯ ತೊರಬೇಕು : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ/ಜಿ.ಪರಮೇಶ್ವರ್
ತುಮಕೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಂತಹ ಪ್ರಬಲ ರಾಜಕಾರಣಿಗಳು ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತಹ ಧೈರ್ಯ ತೊರಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗ್ರಂಥಾಲಯ ಆವರಣದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮಿತಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆ.ಎಚ್.ರಂಗನಾಥರಂತಹ ಹಿರಿಯ ರಾಜಕಾರಣಿ ಚಿತ್ರದುರ್ಗದ ಸಾಮಾನ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾಗಿದ್ದರು. ಅವರಿಗೆ ಹೊಲಿಕೆ ಮಾಡಿದರೆ ಡಾ.ಜಿ.ಪರಮೇಶ್ವರ್ ಹಣ ಬಲವೂ ಇದೆ. ಜಾತಿ ಬಲವೂ ಇದೆ. ಇಂತಹವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲ್ಲುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು ಎಂದರು.
ಅಹಿಂದ ಶಾಸಕರ ಸಂಖ್ಯೆ ಜಾಸ್ತಿ ಆಗಬೇಕು. ಹಾಗಾಗಿ ಕೆಲವರು ಮೀಸಲಾತಿ ಕ್ಷೇತ್ರವನ್ನು ತ್ಯಾಗ ಮಾಡಬೇಕು. ಡಾ.ಪರಮೇಶ್ವರ್ ಸಾಹೇಬರು ಮೀಸಲು ಕ್ಷೇತ್ರ ಬಿಟ್ಟು ಬೇರೆ ಕಡೆ ನಿಂತುಕೊಳ್ಳಲಿ. ಇದರಿಂದ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದ ಅವರು, ಬೇರೆಯವರಿಗೆ ಬಿಟ್ಟುಕೊಟುವ ಮನಸ್ಥಿತಿ ನಮಗೆ ಬರಬೇಕು. ಎಲ್ಲವೂ ನಾವೇ ಪಡೆದುಕೊಂಡು ಕೂತರೇ ಹೇಗೆ, ಬೇರೆಯವರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.





