ಸಿದ್ದರಾಮಯ್ಯನವರ ಪದಚ್ಯುತಿಯಾದರೆ ದಲಿತ ಸಿಎಂ ಪರಮೇಶ್ವರ್ ಆಗಬೇಕು: ಕೆ.ಎನ್. ರಾಜಣ್ಣ

ತುಮಕೂರು: ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ ಆಗಿದೆ. ಮೊದಲು ಒಂದು ಕಡೆ ಹೆಣ್ಣು ನೋಡೋಕೆ ಬರ್ತಾರೆ. ಆ ಮೇಲೆ ಗಂಡು ನೋಡೋಕೆ ಬರ್ತಾರೆ. ಆ ರೀತಿಯಾಗಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತೆ. ಯಾವುದೇ ರಿವರ್ಸ್ ಆಗಲ್ಲ. ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಆ ರೀತಿಯಾಗಿ ಎರಡು ಮನೆಯಲ್ಲಿ ಆಗಿದೆ. ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಬದಲಾವಣೆ ಇದ್ರೆ ಹೈಕಮಾಂಡ್ ಹೇಳ್ತಾರೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರ ಆಗುತ್ತೆ ಎಂದರು.
ದಲಿತ ಸಿಎಂ ಪರಮೇಶ್ವರ್ ಆಗಬೇಕೇಂಬ ಒತ್ತಾಯದ ವಿಚಾರವಾಗಿ ಮಾತನಾಡಿದ ಅವರು, ಅನಿವಾರ್ಯವಾಗಿ ಸಿದ್ದರಾಮಯ್ಯನವರ ಪದಚ್ಯುತಿ ಆದರೆ ದಲಿತ ಸಿಎಂ ಪರಮೇಶ್ವರ್ ಆಗಬೇಕು ಎಂದರು.
ಬಿಜೆಪಿ ಸಚಿವರನ್ನು ರಾಜಣ್ಣ ಪುತ್ರ ರಾಜೇಂದ್ರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸ್ಕ್ರೀಪ್ಕೋ ದಲ್ಲಿ ರಾಜೇಂದ್ರ ಸಿನೀಯರ್ ನಿರ್ದೇಶಕ ಆಗಿದ್ದಾನೆ. ಸ್ಕ್ರೀಪ್ಕೋ ಇಸ್ಕೋದಲ್ಲಿ ಆರ್ಟಿಫಿಶಿಯಲ್ ಮೆನ್ಯೂರ್ ಮಾಡಬೇಕಾಗಿದೆ. ಆ ಎರಡು ಸಮಿತಿಗಳು ಏಷ್ಯಾ ಖಂಡದಲ್ಲಿ ದೊಡ್ಡ ಸಹಕಾರಿ ಸಂಸ್ಥೆಗಳು. ಇದೆಲ್ಲವೂ ಕೇಂದ್ರ ಸಹಕಾರಿ ಸಚಿವರ ಅಡಿಯಲ್ಲಿ ಬರ್ತವೆ. ಇದರ ಬಗ್ಗೆ ಚರ್ಚೆಗಳಿದ್ದಾಗ ಅವರೊಬ್ಬರೇ ಅಲ್ಲ ಇತರೆ ಎಲ್ಲಾ ನಿರ್ದೇಶಕರು ಹೋಗ್ತಾರೆ. ಅಮಿತ್ ಶಾ ಕೂಡಾ ಸಭೆ ಕರೆತಾ ಇರ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದು ಹೇಳಿದರು.







