Tumakur | ವಿಮೆ ಹಣಕ್ಕಾಗಿ ತಮ್ಮನನ್ನೇ ಹತ್ಯೆಗೈದ ಅಣ್ಣ : ನಾಲ್ವರು ಆರೋಪಿಗಳ ಬಂಧನ

ತುಮಕೂರು: ಎಲ್ಐಸಿ ವಿಮೆ ಹಣದ ಆಸೆಗಾಗಿ ಸ್ವಂತ ತಮ್ಮನನ್ನೇ ಅಣ್ಣ ತನ್ನ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿ, ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಪ್ರಕರಣವನ್ನು ಶಿರಾ ಪೊಲೀಸರು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಹನುಮಂತರಾಜು (40), ಲಕ್ಷ್ಮಿಕಾಂತ (31), ನವೀನ್ಕುಮಾರ್ (28) ಹಾಗೂ ಎಂ.ಡಿ. ಜಿಲಾನ್ (21) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ನಿದ್ರಘಟ್ಟ ಗ್ರಾಮದ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ಅವರು ಬೆಂಗಳೂರು ಮತ್ತು ಮಂಡ್ಯದಲ್ಲಿ ಏಳನೀರು ವ್ಯಾಪಾರ ನಡೆಸುತ್ತಿದ್ದರು.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಹಳ್ಳಿ ಮತ್ತು ಬಡೇನಹಳ್ಳಿ ಗೇಟ್ ನಡುವಿನ ಪ್ರದೇಶದಲ್ಲಿ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ಪ್ರಕರಣ ಅಪಘಾತದಂತೆ ಕಂಡುಬಂದಿದ್ದರೂ, ಘಟನಾ ಸ್ಥಳದಲ್ಲಿದ್ದ ಕೆಲವು ಅನುಮಾನಾಸ್ಪದ ಅಂಶಗಳಿಂದ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು.
ತನಿಖೆ ವೇಳೆ ಮೃತ ರಮೇಶ್ ಹಾಗೂ ಆರೋಪಿ ಹನುಮಂತರಾಜು ಅಣ್ಣ-ತಮ್ಮಂದಿರಾಗಿರುವುದು ಬೆಳಕಿಗೆ ಬಂದಿದೆ. ಇಬ್ಬರೂ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮೃತ ರಮೇಶ್ ಹೆಸರಿನಲ್ಲಿ ಸುಮಾರು 15 ಲಕ್ಷ ರೂ. ಮೊತ್ತದ ಜೀವ ವಿಮೆ ಮಾಡಿಸಲಾಗಿದ್ದು, ಅದರ ವಾರ್ಷಿಕ 85 ಸಾವಿರ ರೂ. ಕಂತನ್ನು ಆರೋಪಿ ಹನುಮಂತರಾಜು ಪಾವತಿಸುತ್ತಿದ್ದ. ಅಲ್ಲದೆ, ವಿಮೆಯ ನಾಮಿನಿಯಾಗಿ ತನ್ನ ಹೆಸರನ್ನೇ ನಮೂದಿಸಿದ್ದ ಎನ್ನಲಾಗಿದೆ.
ವಿಮೆ ಹಣ ಪಡೆಯುವ ಉದ್ದೇಶದಿಂದಲೇ ಹನುಮಂತರಾಜು ತನ್ನ ಸ್ನೇಹಿತರೊಂದಿಗೆ ಸೇರಿ ತಮ್ಮನನ್ನು ಹತ್ಯೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಶಿರಾ ಮತ್ತು ಮಧುಗಿರಿ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ, ಪ್ರಶಂಶನಾ ಪತ್ರ ನೀಡಿ ಅಭಿನಂದಿಸಿದ್ದಾರೆ.






