Tumkur | ಹೊಯ್ಸಳಕಟ್ಟೆಯಲ್ಲಿ ಅಪರೂಪದ ’ತುರುಗೋಳ್ ವೀರಗಲ್ಲು’ ಪತ್ತೆ

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಐತಿಹಾಸಿಕ ಮಹತ್ವವಿರುವ ’ತುರುಗೋಳ್ ವೀರಗಲ್ಲು’ ಪತ್ತೆಯಾಗಿದೆ.
ಇಲ್ಲಿನ ಬಸ್ ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ.
ಪ್ರಾಚೀನ ಕಾಲದಲ್ಲಿ ಹಸುಗಳೇ ಅತಿ ದೊಡ್ಡ ಸಂಪತ್ತಾಗಿದ್ದವು. ಶತ್ರುಗಳು ಅಥವಾ ಕಳ್ಳರು ಗ್ರಾಮದ ಹಸುಗಳನ್ನು ಅಪಹರಿಸಲು ಬಂದಾಗ (ತುರುಗೋಳ್), ಅವುಗಳನ್ನು ರಕ್ಷಿಸಲು ಹೋರಾಡಿ ವೀರಮರಣವನ್ನಪ್ಪಿದ ವೀರನ ನೆನಪಿಗಾಗಿ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ.
ವೀರಗಲ್ಲಿನಲ್ಲಿ ವೀರನೊಬ್ಬ ಕೈಯಲ್ಲಿ ಕೊಡಲಿಯನ್ನು ಹಿಡಿದು ನಿಂತಿರುವ ಚಿತ್ರವಿದೆ. ಅವನ ಹಿಂಭಾಗದಲ್ಲಿ ಹಸುಗಳು ಹಾಗೂ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಚಿತ್ರಗಳಿವೆ. ಇದು "ಸೂರ್ಯ-ಚಂದ್ರರಿರುವವರೆಗೂ ಈ ವೀರನ ಕೀರ್ತಿ ಇರಲಿ" ಎಂಬ ಆಶಯವನ್ನು ಸೂಚಿಸುತ್ತದೆ.
ಈ ವೀರಗಲ್ಲಿನ ಕೆಳಭಾಗದಲ್ಲಿ ಎರಡು ಸಾಲುಗಳ ಹಳೆಯ ಕನ್ನಡ ಲಿಪಿಯ ಬರವಣಿಗೆಯಿದೆ. ಇದು 'ಒಡ್ಡಹಳ್ಳಿ' ಎಂಬ ಊರಿನ ವೀರನೊಬ್ಬ ಹಸುಗಳನ್ನು ರಕ್ಷಿಸುವ ಹೋರಾಟದಲ್ಲಿ ಮಡಿದ ಬಗ್ಗೆ ಮಾಹಿತಿ ನೀಡುತ್ತದೆ. ವೀರನ ಕುಟುಂಬಸ್ಥರ ಜೀವನೋಪಾಯಕ್ಕಾಗಿ ಹಾಗೂ ಸ್ಮಾರಕದ ಪೂಜೆಗಾಗಿ ಒಂದು ಸಲಗೆಯಷ್ಟು ಗದ್ದೆಯನ್ನು ದಾನವಾಗಿ ನೀಡಿದ್ದ ವಿವರವೂ ಈ ಶಾಸನದಲ್ಲಿದೆ.
ಹಿಂದೆ ಗ್ರಾಮಸ್ಥರು ಇದನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ, ಮೂಲತಃ ಹೊಯ್ಸಲಕಟ್ಟೆ ಗ್ರಾಮದವರಾದ ಪ್ರಾಚಾರ್ಯೆ ಧರಣೇಂದ್ರ ಕುಮಾರಿ ಅವರು, ತಮ್ಮ ಬುಕ್ಕಾಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಜಂಟಿಯಾಗಿ ಇಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಧರಣೇಂದ್ರ ಕುಮಾರಿ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸತೀಶ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಸನದ ಮಹತ್ವವನ್ನು ಅಧ್ಯಯನ ಮಾಡಿದರು. ಈ ವೇಳೆ ಮಾತನಾಡಿದ ಸತೀಶ್ ಕುಮಾರ್ ನಾಯಕ್, "ಊರಿನ ಇತಿಹಾಸವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಸ್ಮಾರಕಗಳು ನಮ್ಮ ಪೂರ್ವಜರ ಶೌರ್ಯಕ್ಕೆ ಸಾಕ್ಷಿಯಾಗಿವೆ," ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕರಾದ ಸತೀಶ್, ಮಹೇಶ್, ಶಾರ್ವರಿ ಮತ್ತು ನರೇಂದ್ರಬಾಬು ಅವರು ಈ ಸಂಶೋಧನಾ ಕಾರ್ಯದಲ್ಲಿ ಸಾಥ್ ನೀಡಿದರು.






