ವಿಶ್ವದೆಲ್ಲೆಡೆ ಕುಂದಾಪ್ರ ಭಾಷೆ ಪ್ರಚಲಿತ: ಪೂರ್ಣಿಮಾ ಕಮಲಶಿಲೆ

ಕೋಟ, ಆ.10: ಕುಂದಾಪ್ರ ಭಾಷೆ ತನ್ನದೆ ಆದ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿಕೊಂಡಿದೆ. ಆ ಮೂಲಕ ಇಲ್ಲಿನ ಭಾಷೆಯ ಜತೆಗೆ ಸಾಂಪ್ರಾದಾಯಿಕ ಬದುಕು ಕಟ್ಟಿಕೊಟ್ಟಿದೆ ಎಂದು ಕುಂದಗನ್ನಡದ ಸಾಹಿತಿ ಪೂರ್ಣಿಮಾ ಕಮಲಶಿಲೆ ಹೇಳಿದ್ದಾರೆ.
ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ರವಿವಾರ ಕೋಟದ ಹಂದಟ್ಟು ಗೆಳೆಯರ ಬಳಗ ಗೀತಾನಂದ ವೇದಿಕೆಯಲ್ಲಿ ಆಯೋಜಿಸಲಾದ ನಾಲ್ಕನೇ ವರ್ಷದ ಆಸಾಡಿ ಒಡ್ರ್ -2025 ಊರ್ ಕೇರಿ ಬದ್ಕಿನ್ ಹಬ್ಬು ಕುಂದಾಪ್ರ ಭಾಷಿಯ ಗಮ್ಜಲ್ ಮಾಡಿ ಅವರು ಮಾತನಾಡುತಿದ್ದರು.
ಇಂದಿನ ಮಕ್ಕಳು ಕೇವಲ ಮೊಬೈಲ್ ಗೀಳಿನಲ್ಲಿ ಕುಂದಾಪ್ರ ಭಾಷೆ ಬದುಕಿನ ವಿಚಾರಧಾರೆಯನ್ನು ಮೆರೆತಿರುವುದು ಬೇಸರದ ಸಂಗತಿ. ಮನೆಯ ಹಿರಿಯರು ಮಕ್ಕಳಿಗೆ ಇದರ ಉಳಿವಿನ ಬಗ್ಗೆ ಆಗಾಗ ತಿಳಿಹೇಳುವ ಕಾರ್ಯ ಮಾಡ ಬೇಕು. ಇಂತಹ ಕಾರ್ಯಕ್ರಮ ಎಲ್ಲೆಡೆ ಪಸರಿಸಿಕೊಳ್ಳುವ ಮೂಲಕ ಭಾಷಾಭಿಮಾನ, ಬದುಕಿನ ಸಂಸ್ಕಾರದ ಬೀಜ ಬಿತ್ತಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕಿ ಡಾ.ವಾಣಿಶ್ರೀ ಐತಾಳ್ ಮಾತನಾಡಿ, ಕುಂದಾಪ್ರ ಭಾಷೆಯಲ್ಲಿ ವೈವಿಧ್ಯತೆ ಇದೆ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಬದುಕಿನ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ಪರಿಕರವನ್ನು ಮಾಜಿ ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕತಿಕ ಚಿಂತಕಿ ಪ್ರೇಮ ಶೆಟ್ಟಿ ಅನಾವರಣಗೊಳಿಸಿದರು. ಮಣೂರು ಮಹಾ ಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿದರು.
ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಸಾಮಾಜಿಕ ಚಿಂತಕಿ ಭಾರತಿ ವಿ.ಮಯ್ಯ ಇವರಿಗೆ ನೀಡಲಾಯಿತು. ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರವನ್ನು ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಅವರಿಗೆ ಹಸ್ತಾತರಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಚಾಲಕಿ ಸುಜಾತ ಬಾಯರಿ ಹಾಗೂ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸದಸ್ಯೆ ವೀಣಾ ಪ್ರಕಾಶ್ ಪಡುಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ವಸಂತಿ ಕುಂದರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಕಾರ್ಯಕ್ರಮವನ್ನು ಯುವಕ ಮಂಡಲದ ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.
ಗಮನ ಸೆಳೆದ ಎತ್ತಿನ ಗಾಡಿ, ಪರಿಕರ, ತಿನಿಸು!
ಕಾರ್ಯಕ್ರಮದಲ್ಲಿ ಗಾಡಿ ಕೂಸಣ್ಣನ ಎತ್ತಿನ ಗಾಡಿ, ಗ್ರಾಮೀಣ ಪರಿಕರ ಗಳಾದ ಚೆನ್ನಿಮಣಿ, ಕೊಪ್ಪರಿಗೆ, ನೇಗಿಲು ನೋಗ, ತಾಮ್ರದಹರಿ, ಮಣ್ ಮರ್ಗಿ, ಹಳೆಯ ಕಾಲದ ಗಡಿಯಾರ, ಗಾಡಿ ಕೂಸಣ್ಣನ ಎತ್ತಿನಗಾಡಿ, ಗಿರೀಜಾ ಬೋಜಣ್ಣ ಇವರ ಕಂಬಳ ಪರಿಕರ, ಸಾಂಬಾರ್ ಬಟ್ಲ್, ನರೋಳಿ ಸೊಪ್ಪಿನ ದೊಸೆ, ಬೆಸಿದ ಕಡ್ಲೆ,ಅಕ್ಕಿ ಉಂಡಿ ಹೀಗೆ 80ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಕಂಡುಬಂತು.
ಹಂದಟ್ಟು ಸುಬ್ಬಯ್ಯ ಪೂಜಾರಿ ಹೊಲಿ ಕರೆಯುವ ಹಾಗೂ ಸ್ಥಳೀಯ ಪುಟಾಣಿಗಳು ಹೊಲಿ ಕೂಗುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು.







