ಕಲ್ಮಾಡಿ ಚರ್ಚಿನ ವೆಲಂಕಣಿ ಮಾತೆಯ ಮೂರ್ತಿ ಮೆರವಣಿಗೆ

ಮಲ್ಪೆ, ಆ.10: ಮೇರಿ ಮಾತೆಯ ಸರಳತೆಯ ಗುಣ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು ಅವರು ನಡೆದ ಹಾದಿಯಲ್ಲಿ ಮುನ್ನಡೆಯೋಣ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದ್ದಾರೆ.
ಕಲ್ಮಾಡಿ ಸೇತುವೆಯ ಬಳಿ ರವಿವಾರ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಯೇಸುಸ್ವಾಮಿಯ ತಾಯಿ ಮೇರಿ ಮಾತೆ ದೇವರ ವಾಕ್ಯವನ್ನು ಪರಿಪಾಲಿಸಿ ತನ್ನ ಸರಳ, ದೀನತೆಯ ಬದುಕಿನಿಂದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದರು.
ಕಲ್ಮಾಡಿ ಸೇತುವೆಯ ಬಳಿಯಲ್ಲಿ ವೆಲಂಕಣಿ ಮಾತೆಯ ಮೂರ್ತಿಯ ಆಶೀರ್ವಚನ ನಡೆಯಿತು. ಇದೇ ವೇಳೆ ಭಾರತೀಯ ಕಥೊಲಿಕ ಯುವ ಸಂಚಾಲನ ಕರ್ನಾಟಕ ಪ್ರಾಂತ ಇದರ ವಾರ್ಷಿಕ ಸಮಾವೇಶದ ಪೂರ್ವ ಭಾವಿಯಾಗಿ ರಾಜ್ಯದಾದ್ಯಂತ ಸಂಚಾರದ್ಲಲಿರುವ ಪವಿತ್ರ ಶಿಲುಬೆಯ ಮೆರವಣಿಗೆ ತೊಟ್ಟಂ ಸಂತ ಅನ್ನಮ್ಮ ಚರ್ಚಿಯ ಐಸಿವೈಎಂ ಸದಸ್ಯರು ಕಲ್ಮಾಡಿ ಚರ್ಚಿನ ಯುವ ಪದಾಧಿಕಾರಿಗಳಿಗೆ ಪವಿತ್ರ ಶಿಲುಬೆಯನ್ನು ಹಸ್ತಾಂತರಿಸಿದರು.
ಬಳಿಕ ವೆಲಂಕಣಿ ಮಾತೆಯ ಮೂರ್ತಿ ಹಾಗೂ ಪವಿತ್ರ ಶಿಲುಬೆಯೊಂದಿಗೆ ಚರ್ಚಿಗೆ ಪಾದಯಾತ್ರೆಯ ಮೂಲಕ ತೆರಳಲಾಯಿತು. ಮೆರವಣಿಗೆಯ ಬಳಿಕ ಚರ್ಚಿನಲ್ಲಿ ನೊವೆನಾ ಪ್ರಾರ್ಥನೆ ಮತ್ತು ಪವಿತ್ರ ಬಲಿಪೂಜೆ ನೆರವೇರಿತು.
ಪುಣ್ಯಕ್ಷೇತ್ರದ ರೆಕ್ಟರ್ ವಂ.ಬ್ಯಾಪ್ಟಿಸ್ಟ್ ಮಿನೇಜಸ್, ಯುವ ಆಯೋಗ ಉಡುಪಿ ಧರ್ಮಪ್ರಾಂತ್ಯದ ನಿರ್ದೇಶಕ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಆ.15ರಂದು ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಬಲಿಪೂಜೆ ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.







