ಮೂರು ದಿನಗಳ ನಿರಂತರ ಸಿನಿಮಾ ಉತ್ಸವ ಮುಕ್ತಾಯ

ಉಡುಪಿ, ಆ.12: ನಿರಂತರ ಉದ್ಯಾವರ ಸಂಘಟನೆಯ 8ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಸಾಮಾಜಿಕ ಕಳಕಳಿಯ ಆಯ್ದ 3 ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳ ನಿರಂತರ ಸಿನೆಮಾ ಉತ್ಸವ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯ ಚಲನಚಿತ್ರದ ಮೂಲಕ ನಿರಂತರ ಸಂಘಟನೆಯು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದೆ. ಇಂತಹ ಚಲನಚಿತ್ರ ಗಳಿಗೆ ಕಡಿಮೆ ಪ್ರೇಕ್ಷಕರು ಬರುತ್ತಾರೆಯಾದರೂ, ಅವರೆಲ್ಲರೂ ಇಂತಹ ಸನ್ನಿವೇಶಗಳಿಗೆ ಪೂರಕವಾಗಿರುತ್ತಾರೆ ಎಂದರು.
ದಾಯ್ಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಚಿಕ್ಕ ಮಕ್ಕಳಿಂದ ಹಿರಿಯರ ವರೆಗೂ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ. ಮಾನಸಿಕ ಖಿನ್ನತೆಯ ಮೂಲಕ ದಿನ ಪ್ರತಿ ಬಹಳಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜನರಿಗೆ ಮನೋರಂಜನೆ ನೀಡಲು ಮನೋರಂಜನ ಇಂಡಸ್ಟ್ರಿ ಕೋಟ್ಯಾಂತರ ವೆಚ್ಚ ಮಾಡುತ್ತಿದೆ. ಇಂತಹ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ನಮ್ಮಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಬದಲಾವಣೆ ತರಲು ಸಾಧ್ಯ ಎಂದರು.
ದ್ವಿತೀಯ ದಿನ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್, ಪತ್ರಕರ್ತ ನವೀನ್ ಸೂರಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ಜೊಯ್ಲಿನ್ ನೊರೋನ್ಹಾ ಮತ್ತು ಸಾಮಾಜಿಕ ಬದ್ಧತೆಯ ಚಲನಚಿತ್ರದ ನಿರ್ದೇಶಕರಾದ ಮಟಸೋರೆ ಮತ್ತು ಉತ್ಸವ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚಿಂತಕ ಕೆ.ಫಣಿರಾಜ್, ನಿರಂತರ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಉದ್ಯಾವರ ಸಂಘಟನೆಯ ಅಧ್ಯಕ್ಷ ಕ್ರಾಸ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ಒಲಿವೀರಾ ಮತಾಯಸ್ ವಂದಿಸಿದರು. ಸ್ಥಾಪಕ ಅಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳಲ್ಲಿ ಖ್ಯಾತ ನಿರ್ದೇಶಕರಾದ ಮಟಸೋರೆ ನಿರ್ದೇಶಕ ಆಕ್ಟ್ 1978, 19.20.21 ಮತ್ತು ಉತ್ಸವ ಗೋನಾವರ ನಿರ್ದೇಶಿಸಿದ ಫೋಟೋ ಚಲನಚಿತ್ರಗಳು ಪ್ರದರ್ಶನಗೊಂಡವು.







