ಮಣಿಪಾಲ: ಮಾಹೆಗೆ ಗೃಹ ಸಚಿವ ಡಾ.ಪರಮೇಶ್ವರ್ ಭೇಟಿ

ಉಡುಪಿ: ಕರ್ನಾಟಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಗೆ ಭೇಟಿ ನೀಡಿದರು.
ಡಾ.ಜಿ.ಪರಮೇಶ್ವರ್ ಮಾಹೆಯ ದೀರ್ಘಕಾಲದ ಪರಂಪರೆ ಹಾಗೂ ಶಿಕ್ಷಣ, ಆರೋಗ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆ ಕ್ಷೇತ್ರಗಳಲ್ಲಿ ಕಾಪಾಡಿಕೊಂಡಿರುವ ಉನ್ನತ ಮಟ್ಟದ ಮಾನದಂಡಗಳನ್ನು ಪ್ರಶಂಸಿಸಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರಿಗೆ ಗೌರವ ನಮನ ಸಲ್ಲಿಸಿ, ಸಮಗ್ರ ಅಭಿವೃದ್ಧಿ, ವಿಶ್ವಮಟ್ಟದ ಮೂಲಸೌಕರ್ಯ ಮತ್ತು ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಾಹೆ ತೋರಿಸಿರುವ ಬದ್ಧತೆಯನ್ನು ಪ್ರಶಂಸಿಸಿದರು.
ಉನ್ನತ ಶಿಕ್ಷಣದ, ವಿಶೇಷವಾಗಿ ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯದ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಡುವ ಮಾಹೆಯ ಸ್ಥಾನವನ್ನು ಉಲ್ಲೇಖಿಸಿ, ರಾಷ್ಟ್ರೀಯ ಹಾಗೂ ಜಾಗತಿಕ ಆರೋಗ್ಯ ಕ್ಷೇತ್ರಗಳಲ್ಲಿ ಈ ಸಂಸ್ಥೆಯ ಅಗಾಧ ಕೊಡುಗೆಯನ್ನು ಪ್ರಸ್ತಾಪಿಸಿದರು. ಭಾರತದ ವಿಸ್ತರಿಸುತ್ತಿರುವ ಶೈಕ್ಷಣಿಕ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುವ ಮಹತ್ವವನ್ನು ಒತ್ತಿ ಹೇಳಿದರು.
ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ಅವರು ಸಚಿವ ಡಾ. ಪರಮೇಶ್ವರ ಅವರನ್ನು ಸ್ವಾಗತಿಸಿ ದರು. ಮಾಹೆ ರಿಜಿಸ್ಟ್ರಾರ್ ಡಾ. ಗಿರಿಧರ ಕಿಣಿ ವಂದಿಸಿದರು. ಪ್ರೊ ವೈಸ್ಚಾನ್ಸಲರ್ ಡಾ. ನಾರಾಯಣ್ ಸಭಾಹಿತ್ ಉಪಸ್ಥಿತರಿದ್ದರು.
ಡಾ.ಜಿ.ಪರಮೇಶ್ವರ ಅವರು ಮಾಹೆಯ ಆಧುನಿಕ ಕ್ರೀಡಾಂಗಣ ಮರೇನಾ ಸೇರಿ ಮಾಹೆ ಕ್ಯಾಂಪಸ್ನ ಪ್ರಮುಖ ಸೌಲಭ್ಯಗಳನ್ನು ವೀಕ್ಷಿಸಿದರು.







