ಬೆಂಗಳೂರು - ಮಡಗಾಂವ್ ಜಂಕ್ಷನ್ ನಡುವೆ ಚೌತಿ ಸ್ಪೆಷಲ್ ರೈಲು

ಉಡುಪಿ, ಆ.25: ಚೌತಿ ಹಬ್ಬದ ಸಂದರ್ಭದಲ್ಲಿ ಜನರ ಬೇಡಿಕೆಯನ್ನು ಅನುಲಕ್ಷಿಸಿ ಕೊಂಕಣ ರೈಲ್ವೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ -ಮಡಗಾಂವ್ ಜಂಕ್ಷನ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.
ರೈಲು ನಂ.06569 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ರೈಲು ಆ.26ರ ಮಂಗಳವಾರ ಅಪರಾಹ್ನ 1:00ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಲಿದ್ದು, ಮರುದಿನ ಮುಂಜಾನೆ 5:30ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ಮರು ಪ್ರಯಾಣದಲ್ಲಿ ರೈಲು ನಂ.06570 ಮಡಗಾಂವ್ ಜಂಕ್ಷನ್- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು ಆ.27ರ ಬುಧವಾರ ಮುಂಜಾನೆ 6:30ಕ್ಕೆ ಮಡಗಾಂವ್ ಜಂಕ್ಷನ್ನಿಂದ ಪ್ರಯಾಣ ಪ್ರಾರಂಭಿಸಿ ಅದೇ ದಿನ ರಾತ್ರಿ 11:40ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು 10 ಸ್ಲೀಪರ್ ಕೋಚ್, ನಾಲ್ಕು ಜನರಲ್ ಕೋಚ್ ಹಾಗೂ ಎರಡು ಎಸ್ಎಲ್ಆರ್ ಸೇರಿದಂತೆ ಒಟ್ಟು 16 ಕೋಚ್ಗಳೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







