ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಸರಕಾರಗಳೇ ಹೊಣೆ: ಅಬ್ದುಲ್ ಸಲಾಂ ಚಿತ್ತೂರು

ಕುಂದಾಪುರ, ಆ.29: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಯಾಗಲು ಮೂಲಸೌಕರ್ಯ, ಶಿಕ್ಷಕರ ಕೊರತೆ ಕಾರಣವಾಗಿದ್ದು ಇದಕ್ಕೆ ಆಳುವ ಸರಕಾರಗಳೇ ನೇರ ಹೊಣೆಯಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ಜೊತೆಗೆ ಎಸ್ಡಿಎಂಸಿ ಸಬಲೀಕರಣ, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ರಾಜಕೀಯ, ಜಾತಿ-ಧರ್ಮ ರಹಿತವಾಗಿ ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕ, ಶಿವಪ್ರಸಾದ್ ಗ್ರಾಂಡ್ ಕುಂದಾಪುರ ಸಹೋಗದೊಂದಿಗೆ ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ಸುಗಮಕಾರರಾಗಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಶುಕ್ರವಾರ ಇಲ್ಲಿನ ಶಿವಪ್ರಸಾದ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಸರಕಾರಿ ಶಾಲೆಗಳ ಮೂಲಕ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಹೆಚ್ಚಿಸುವ ಕೆಲಸವಾಗುತ್ತಿದೆ. ಆರೋಗ್ಯ ಹಾಗೂ ಶಿಕ್ಷಣ ಉಚಿತವಾಗಿ ಸಿಕ್ಕರೆ ನೆಮ್ಮದಿ ಜೀವನ ಸಾಧ್ಯ. ಅಕ್ಷರ ಜ್ಞಾನ ನೀಡಿದ ಸರಕಾರಿ ಶಾಲೆಗಳ ಅಭ್ಯುದಯಕ್ಕೆ ಅಲ್ಲಿನ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯೂ ಅಗತ್ಯವಾಗಿದ್ದು ಕಾನೂನು ಬದ್ಧವಾಗಿ ಹಳೆ ವಿದ್ಯಾರ್ಥಿ ಸಂಘ ರಚಿಸಿ ಅದಕ್ಕೆ ಆ ಶಾಲೆ ಮುಖ್ಯೋಪಾಧ್ಯಾಯರು ಕಾರ್ಯದರ್ಶಿಯಾಗಿ ನೇಮಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಕೋಟೇಶ್ವರ ಗೀತಾ ಎಚ್ಎಸ್ಎನ್ ಫೌಂಡೇಶನ್ನ ಅಧ್ಯಕ್ಷ, ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಮಹಾ ಪೋಷಕ ಶಂಕರ್ ಐತಾಳ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಶಾಲೆ ಅಭಿವೃದ್ಧಿ ಮಾಡುವ ಸೇವಾ ಕೈಂಕರ್ಯ ತೃಪ್ತಿ ನೀಡುತ್ತದೆ. ಹೀಗಾಗಿ ಅಮಾಸೆಬೈಲು ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.
ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ನಾಗರಾಜ ಮಾತನಾಡಿ, ಸರಕಾರಿ ಶಾಲೆಗಳ ಉಳಿವು-ಬೆಳವಣಿಗೆ ದೃಷ್ಟಿಯಿಂದ, ಎಸ್ಡಿಎಂಸಿ ಹಕ್ಕು, ಕರ್ತವ್ಯಗಳನ್ನು ಜಾಗೃತಿಗೊಳಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮನದಟ್ಟು ಮಾಡುವ ಸಲುವಾಗಿ ಸಮನ್ವಯ ವೇದಿಕೆ 2013ರಲ್ಲಿ ಆರಂಭಗೊಂಡಿದ್ದು ಕಟ್ಟಕಡೆಯ ಮಗು ಕೂಡ ಗುಣಮಟ್ಟದ ಶಿಕ್ಷಣ ಪಡೆಯಲು ಇಲಾಖೆಗಳ ಮಾರ್ಗ ದರ್ಶನ, ಸಹಯೋಗದಲ್ಲಿ ಸಮನ್ವಯ ವೇದಿಕೆ ರಾಜಕೀಯ ರಹಿತ, ಸ್ವಹಿತಾಸಕ್ತಿ ರಹಿತ, ಜಾತಿ ರಹಿತ ಸಂಘಟನೆಯಾಗಿ ಸರ್ವಧರ್ಮದ ದೇಗುಲಗಳಾದ ಸರಕಾರಿ ಶಾಲೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು. ಕುಂದಾಪುರ ಪುರಸಭಾ ಸದಸ್ಯ ಅಬು ಮೊಹಮ್ಮದ್ ಮುಜಾವರ್, ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಕರ್ನಾಟಕ ರಾಜ್ಯ ಸಂಚಾಲಕ ಮೊಯಿದಿನ್ ಕುಟ್ಟಿ, ಸಂಘಟನೆಯ ಪುರಸಭಾ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಜಿಲ್ಲಾ ಕಾರ್ಯದರ್ಶಿ ದೀಪಾ ಜಪ್ತಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಪ್ರಮೋದಾ ಕುಶಲ್ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಘಟಕದ ಕಾರ್ಯದರ್ಶಿ ವರದಾ ಸುಧಾರ್ಕ ಆಚಾರ್ಯ ವಂದಿಸಿದರು.







