ಕರ್ತವ್ಯಲೋಪ : ಉಡುಪಿ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಡಿಸಿಗೆ ಮನವಿ

ಉಡುಪಿ, ಆ.29: ದಲಿತ ಕುಟುಂಬದ ಮನೆಗೆ ತೆರಳುವ ಸರಕಾರಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸದೆ ಗಂಭೀರ ಕರ್ತವ್ಯಲೋಪ ಎಸಗಿದ ಉಡುಪಿ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮನವಿ ಸಲ್ಲಿಸಿದೆ.
ಉದ್ಯಾವರ ಗ್ರಾಮದ ಪಿತ್ರೋಡಿಯ ರಸ್ತೆ ಅತಿಕ್ರಮಣ ಮಾಡಿರುವ ಬಗ್ಗೆ ತಾಲ್ಲೂಕು ಮೋಜಣಿದಾರರು ಒತ್ತುವರಿ ಖಚಿತಪಡಿಸಿ ನಕ್ಷೆ ಸಹಿತ ವರದಿ ನೀಡಿದ್ದರೂ, ಮುಕ್ತ ಸಂಚಾರವನ್ನು ಪ್ರತಿಬಂಧಿಸಿ ದಲಿತ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಉಡುಪಿ ತಹಶೀಲ್ದಾರ್ ಯಾವುದೇ ಕ್ರಮ ತೆಗೆದುಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಬೈಂದೂರು ತಾಲ್ಲೂಕು ನಾಡ ಗ್ರಾಮದಲ್ಲಿ ಹಲವು ದಶಕಗಳು ಕಳೆದರೂ ಸರಕಾರಿ ಜಮೀನು ಮಂಜೂರಾತಿ ಯಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಲಭ್ಯ ಸರಕಾರಿ ಜಮೀನುಗಳಲ್ಲಿ ಶೇ.50ರಷ್ಟನ್ನು ದಲಿತರಿಗೆ ಮೀಸಲಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್, ಬೈಂದೂರು ವಲಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಿತಿಯ ಮುಖಂಡರಾದ ನಾಗರತ್ನ ನಾಡ, ರಂಗನಾಥ ಕೊರಂಗರಪಾಡಿ, ನಾಗರತ್ನ ಆರ್., ನಾಡ ಗ್ರಾಮದ ಭೂ ರಹಿತ ದಲಿತ ಮಹಿಳೆಯರು ಉಪಸ್ಥಿತರಿದ್ದರು.







