ಉಡುಪಿ: ದೀಕ್ಷಾರಿಂದ ಭರತನಾಟ್ಯದಲ್ಲಿ ಹೊಸ ವಿಶ್ವದಾಖಲೆ

ಉಡುಪಿ, ಆ.29: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಲು ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಮಾಡುತ್ತಿರುವ ನೃತ್ಯ ವಿದುಷಿ ದೀಕ್ಷಾ ವಿ. ಅವರು ನಾಳೆ ಅಪರಾಹ್ನ 3:30ಕ್ಕೆ ಹೊಸ ವಿಶ್ವದಾಖಲೆಯೊಂದಿಗೆ ಸತತ 9 ದಿನಗಳ ತನ್ನ ನೃತ್ಯ ಪ್ರದರ್ಶನವನ್ನು ಮುಕ್ತಾಯಗೊಳಿಸಲಿದ್ದಾರೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ಉಡುಪಿ ಅಜ್ರಕಾಡಿನ ಡಾ.ಜಿ.ಶಂಕರ್ ಮಹಿಳಾ ಸ್ನಾತಕೋತ್ತರ ಕಾಲೇಜು ಸಭಾಂಗಣದಲ್ಲಿ ಕಳೆದ ಆ.21ರಿಂದ ಭರತನಾಟ್ಯ ಪ್ರದರ್ಶನದಲ್ಲಿ ತೊಡಗಿದ್ದಾರೆ.
ಗುರುವಾರ ಸಂಜೆ 5:30ರ ಸುಮಾರಿಗೆ 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ಮಾಡಿ ಕಳೆದು ತಿಂಗಳು ಮಂಗಳೂರಿನ ರೆಮೋನಾ ಅವರು ಸ್ಥಾಪಿಸಿದ ವಿಶ್ವ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದರು. ನಾಳೆ ಅಪರಾಹ್ನ ವಿದುಷಿ ದೀಕ್ಷಾ ಅವರು ತನ್ನ ಪ್ರದರ್ಶನವನ್ನು ಮುಕ್ತಾಯಗೊಳಿಸುವಾಗ ನಿರಂತರ ವಾಗಿ 216 ಗಂಟೆ ಗಳ ಹೊಸ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿರುತ್ತಾರೆ.
ದೀಕ್ಷಾ ಅವರ 9 ದಿನಗಳ ಹೊಸ ಸಾಧನೆಯನ್ನು ನವರಸ ದೀಕ್ಷಾ ವೈಭವಂ ಕಾರ್ಯಕ್ರಮದ ಮೂಲಕ ಸಂಪನ್ನಗೊ ಳ್ಳಲಿದ್ದಾರೆ. ಶನಿವಾರ ಅಪರಾಹ್ನ 3:30ಕ್ಕೆ 216 ಗಂಟೆಗಳ ಸಾಧನೆಯ ಗುರಿ ತಲುಪಲಿದ್ದು,ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ನಮೂದಿಸುವ ಮೂಲಕ ನಮ್ಮ ಜಿಲ್ಲೆ ಹಾಗೂ ರಾಜ್ಯದ ಗೌರವವನ್ನು ಹೆಚ್ಚಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಶ್ಯಾ ಹೆಡ್ ಮನೀಶ್ ಬಿಷ್ಣೋಯ್ ಉಪಸ್ಥಿತರಿದ್ದು, ದೀಕ್ಷಾರ ವಿಶ್ವ ದಾಖಲೆಯನ್ನು ಘೋಷಿಸಿ ಪ್ರಮಾಣ ಪತ್ರ ನೀಡಲಿದ್ದಾರೆ ಎಂದರು.
ನಾಳೆ ಸಂಜೆ 5:00ಗಂಟೆಗೆ ವಿಶ್ವದಾಖಲೆ ಮಾಡಿದ ದೀಕ್ಷಾರನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಕಾರ್ಯಕ್ರಮ ವಿದೆ. ಅಜ್ಜರಕಾಡು ಮೈದಾನದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.
ಈ ಸಂದರ್ಭದಲ್ಲಿ ವಿದುಷಿ ದೀಕ್ಷಾ ವಿ ಅವರ ಪತಿ ರಾಹುಲ್, ರತ್ನ ಸಂಜೀವ ಕಲಾ ಮಂಡಲ ಅಧ್ಯಕ್ಷರಾದ ಮಹೇಶ್ ಠಾಕೂರ್, ಕಲಾ ಗುರುಗಳಾದ ವಿದ್ವಾನ್ ಶ್ರೀಧರ್ ರಾವ್ ಉಪಸ್ಥಿತರಿದ್ದರು.







