ಸಮುದ್ರದಲ್ಲಿ ಮಗುಚಿ ಬಿದ್ದ ದೋಣಿ: ನಾಲ್ವರು ಮೀನುಗಾರರ ರಕ್ಷಣೆ

ಮಲ್ಪೆ: ತೊಟ್ಟಂ ಬಳಿ ಇಂದು ಬೆಳಗ್ಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಅಬ್ಬರದ ಅಲೆ ಗಳಿಗೆ ಮಗುಚಿ ಬಿದ್ದಿದ್ದು ಇದರಲ್ಲಿದ್ದ ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯರಾದ ಜೀವನ್ ಎಂಬವರ ದೋಣಿಯಲ್ಲಿ ಏಡಿ ಬಲೆಗಾಗಿ ಆಂಧ್ರಪ್ರದೇಶ ಮೂಲದ ನಾಲ್ವರ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯು ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮಗುಚಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮುಳುಗು ತಜ್ಞ ಈಶ್ವರ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ತಂಡವು ಮೀನುಗಾರರಾದ ಪ್ರವೀಣ್ ಹಾಗೂ ಉದಯ್ ಜೊತೆಯಾಗಿ ನೀರಿಗೆ ಇಳಿದು ಅಪಾಯದಲ್ಲಿದ್ದ ನಾಲ್ವರಿಗೆ ಲೈಫ್ ಜಾಕೆಟ್ ನೀಡಿ ರಕ್ಷಣೆ ಮಾಡಿ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಮೀನುಗಾರಿಕೆಗೆ ತೆರಳುವ ಮೀನುಗಾರರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿ ತಮ್ಮ ಪ್ರಾಣವನ್ನು ಉಳಿಸಬೇಕಾಗಿ ಈಶ್ವರ ಮಲ್ಪೆ ತಂಡ ಮೀನುಗಾರರಲ್ಲಿ ಮನವಿ ಮಾಡಿದೆ.





