ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ: ಪದ್ಮ ರಾಘವೇಂದ್ರ

ಉಡುಪಿ, ಆ.31: ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರು ತಿಂಗಳಿಗೊಮ್ಮೆ ಬಿಪಿ, ಶುಗರ್ ಪರೀಕ್ಷಿಸಿ, ನಿಯಮಿತ ಆಹಾರ ಸೇವೆನೆ, ವ್ಯಾಯಾಮ ಮುಂತಾದುವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಒತ್ತಡಗಳಿಂದ ಹೊರಬರಲು ಸಾಧ್ಯ ಎಂದು ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ಹೇಳಿದ್ದಾರೆ.
ಮಂಗಳೂರು ಮುಕ್ಕ ಶ್ರೀನಿವಾಸ ಯುನಿವರ್ಸಿಟಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್ ವತಿಯಿಂದ ಉಡುಪಿ ಜಗನ್ನಾಥ ಸಭಾಭವನದಲ್ಲಿ ಶನಿವಾರ ಛಾಯಾಗ್ರಾಹಕರಿಗಾಗಿ ಆಯೋಜಿಸಲಾದ ಲೆನ್ಸ್ ಹಿಂದೆ ನೋಟ ಎಂಬ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಉದ್ಘಾಟಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನಿಯೋಜಿತ ಅಧ್ಯಕ್ಷ ದಿವಾಕರ್ ಹಿರಿಯಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಉಪನ್ಯಾಸಕಿ ಪೂರ್ಣಿಮಾ ಸಿ., ಒತ್ತಡ ನಿರ್ಮೂಲನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ಛಾಯಾಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ಸಹಾಯಕ ಉಪನ್ಯಾಸಕಿ ಜೀವಿತಾ ವಾಮನ್ ಹಾಸ್ಯ ವ್ಯಾಯಾಮ ಹಾಗು ಧ್ಯಾನದ ಬಗ್ಗೆ ಪ್ರಾತ್ಯಕ್ಷಕಿಯ ಮೂಲಕ ಮಾಹಿತಿ ನೀಡಿದರು.
ವಾಮನ್ ಪಡುಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕೊರಂಗ್ರಪಾಡಿ ಸ್ವಾಗತಿಸಿದರು. ಸುಕೇಶ್ ಅಮೀನ್ ವಂದಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ನರ್ಸಿಂಗ್ ಸೈನ್ಸ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಮದ್ಯಪಾನ, ಆತ್ಮಹತ್ಯೆ ತಡೆ, ಮೊಬೈಲ್ ವ್ಯಸನ ತಡೆ ಹಾಗು ಒತ್ತಡ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಮೈಮ್ ಶೋ ಕಾರ್ಯಕ್ರಮ ನಡೆಸಿದರು.







