ವಾಸ್ತವದಲ್ಲಿ ಸ್ತ್ರೀ ಗೃಹ ರಕ್ಷತಿಯಾದರೆ ನೆಮ್ಮದಿಯ ಬದುಕು: ತಲ್ಲೂರು

ಉಡುಪಿ, ಸೆ.15: ಪ್ರತಿಯೊಬ್ಬನ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಿದ್ದರೆ ಅದಕ್ಕಿಂತ ದೊಡ್ಡ ಸಂಪತ್ತಿಲ್ಲ. ಮನೆ ನೆಮ್ಮದಿಯಾಗಿ ಇರಬೇಕಾದರೆ ಮನೆಯ ಯಜಮಾನಿ ಸಂತೋಷದಿಂದ ಇರುವುದು ಅತೀ ಮುಖ್ಯ. ಇದನ್ನು ಅರಿತು ಬಾಳಿದವನ ಬದುಕು ಹಸನಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಭಾವಭೂಮಿ ಕುಂದಾಪುರ, ಧಮನಿ ತೆಕ್ಕಟ್ಟೆ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರ ಸಹಯೋಗದಲ್ಲಿ ತೆಕ್ಕಟ್ಟೆಯ ಶ್ರೀಹಯಗ್ರೀವ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ದಿವ್ಯಾ ಶ್ರೀಧರ ರಾವ್ ರಚಿಸಿ, ನಾಗೇಶ್ ಕೆದೂರು ನಿದೇರ್ಶನದ ಶಶಿಕಾಂತ್ ಶೆಟ್ಟಿ ಕಾರ್ಕಳದ ಅಭಿನಯದಲ್ಲಿ ಪ್ರಸ್ತುತಿಗೊಂಡ ’ಸ್ತ್ರೀ ಗೃಹಂ ರಕ್ಷತಿ’ ಏಕ ವ್ಯಕ್ತಿ ರಂಗ ಪ್ರಯೋಗದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಯಾವ ಮನೆಯಲ್ಲಿ ಸ್ತ್ರೀಗೆ ರಕ್ಷಣೆ ಇದೆಯೋ ಅದು ದೇವಾಲಯ ಇದ್ದ ಹಾಗೆ ಎಂಬ ಮಾತಿದೆ. ಇದೀಗ ಈ ಸಂದೇಶ ವನ್ನು ರಂಗಭೂಮಿ ಮೂಲಕ ಶಶಿಕಾಂತ್ ಶೆಟ್ಟಿ ಕಾರ್ಕಳ ಅವರು ಸ್ತ್ರೀ ಸಂವೇದನೆಯೊಂದಿಗೆ ಅಭಿನಯಿಸಿ ತೋರಿ ಸುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿ ಸಾವಿರಾರು ಪ್ರದರ್ಶನ ಗಳನ್ನು ಕಾಣುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಹಿರಿಯ ಯಕ್ಷಗಾನ ಕಲಾವಿದ ಎಸ್.ಜನಾರ್ದನ ಹಂದೆ ಮಾತನಾಡಿ, ಅಭಿನಯ ಹೃದಯ ತುಂಬಿ ಬಂದಾಗ ಮಾತ್ರ ಪಾತ್ರ ಯಶಸ್ಸು ಕಾಣುತ್ತದೆ. ಇದಕ್ಕೆ ಕಲಾವಿದರು ಬಹಳ ಶ್ರಮ ಪಡಬೇಕಾಗುತ್ತದೆ. ನಟನೆ ಅಷ್ಟು ಸುಲಭದಲ್ಲಿ ಕೈ ಹಿಡಿಯದು. ಭಾವತಲ್ಲೀನತೆ ಅಗತ್ಯ ಎಂದರು.
ಕಾರ್ಯಕ್ರಮವನ್ನು ಹಳ್ಳಿ ರಾಮಚಂದ್ರ ಶಾಸ್ತ್ರಿ ಉದ್ಘಾಟಿಸಿದರು. ದಿವ್ಯಾ ಶ್ರೀಧರ ರಾವ್, ವೆಂಕಟೇಶ ವೈದ್ಯ ತೆಕ್ಕಟ್ಟೆ, ನಂದೀಶ್ ಶೆಟ್ಟಿ ಅಲ್ತಾರು, ಸುಧೀರ್ ಶೆಟ್ಟಿ ಮಲ್ಯಾಡಿ, ಶ್ರೀಶ ತೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಅಕ್ಷತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.







