ಕಾರ್ಕಳ: ಬಿ.ವಿ.ಕಾರಂತರ ನೆನಪು ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಸೆ.19: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷರಂಗಾಯಣ ಕಾರ್ಕಳ ಇವರ ವತಿಯಿಂದ ಗುರುವಾರ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಆವರಣದಲ್ಲಿ ಬಿ.ವಿ.ಕಾರಂತರ ನೆನಪು ಸರಣಿ ಕಾರ್ಯ ಕ್ರಮದ ಉದ್ಘಾಟನೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕವಿ, ಚಿಂತಕ ಹಾಗೂ ರಂಗಕರ್ಮಿ ಗುರುರಾಜ ಮಾರ್ಪಳ್ಳಿ, ಒಬ್ಬ ಮನುಷ್ಯ ಶ್ರೀಮಂತನಾಗಿದ್ದು ಕೊಂಡು ಶ್ರೀಮಂತಿಕೆಯ ಲೇಪವಿಲ್ಲದೇ ಬದುಕುವುದು ಕಲಾವಿದನ ಶ್ರೇಷ್ಠ ಗುಣ. ಅಂತಹ ವ್ಯಕ್ತಿತ್ವವನ್ನು ಹೊಂದಿದವರು ಬಿ.ವಿ.ಕಾರಂತರು. ನಾಟಕಗಳಿಗಾಗಿ ಬದ್ಧತೆಯಿಂದ ಕೆಲಸ ನಿರ್ವಹಿಸಿದ ಅವರು ನಾಟಕಗಳಿಗೆ, ರಂಗಭೂಮಿಗೆ ಹೊಸ ರೂಪ ನೀಡಿದರು ಎಂದರು.
ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿ, ಬಿ.ವಿ.ಕಾರಂತರು ನಾಟಕಗಳಿಗೆ ಉತ್ಸವದ ಕಳೆಯನ್ನು ತುಂಬುವ ಜೊತೆಗೆ ನಾಟಕಗಳನ್ನು ಅತ್ಯಂತ ವಿಶಿಷ್ಟ ಶೈಲಿಯಲ್ಲಿ ರಚಿಸಿದ ವರು. ಬಿ.ವಿ. ಕಾರಂತರು ದೇಶದ ವಿವಿಧ ಪ್ರದೇಶದ ಸಂಗೀತ ಪ್ರಕಾರಗಳಿಂದ ಸ್ಪೂರ್ತಿ ಪಡೆದುಕೊಂಡು ಹೊಸ ಬಗೆಯ ರಂಗ ಸಂಗೀತವನ್ನು ಸ್ಟೃಷ್ಟಿಮಾಡುವ ಮೂಲಕ ದೇಶದ ರಂಗಭೂಮಿಗೆ ಹೊಸ ಜೀವವನ್ನು ತಂದು ಕೊಟ್ಟರು ಎಂದರು.
ಈ ಸಂದರ್ಭದಲ್ಲಿ ಗುರುರಾಜ ಮಾರ್ಪಳ್ಳಿ ಮತ್ತು ನಿನಾದ ತಂಡದಿಂದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಬಿ.ವಿ.ಕಾರಂತರ ರಂಗಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಯಕ್ಷ ರಂಗಾಯಣ ರೆಪರ್ಟರಿ ತಂತ್ರಜ್ಞ ಚಂದ್ರನಾಥ ಬಜಗೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







