ಕುಂದಾಪುರ: ಬುಡಸಹಿತ ಧರೆಗುರುಳಿದ ಬೃಹತ್ ಗಾತ್ರದ ಮರ

ಕುಂದಾಪುರ, ಅ.2: ಇಲ್ಲಿನ ಹಳೆ ತಾಲೂಕು ಕಚೇರಿ ಸಮೀಪದಲ್ಲಿದ್ದ ಹಲವಾರು ವರ್ಷಗಳ ಹಿಂದಿನ ಬೃಹತ್ ಗಾತ್ರದ ದೇವದಾರಿ ಮರವೊಂದು ಗುರುವಾರ ಸಂಜೆ ಬುಡಸಹಿತ ಧರಾಶಾಹಿಯಾದ ಹಿನ್ನೆಲೆ ಅಂಚೆ ಇಲಾಖೆಯ ಕುಂದಾಪುರ ಮಾರ್ಕೆಟ್ ಉಪ ಅಂಚೆ ಕಚೇರಿ ಕಟ್ಟಡ ಬಹುತೇಕ ಹಾನಿಗೊಳಗಾದ ಘಟನೆ ನಡೆದಿದೆ.
ಪ್ರಸ್ತುತ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರ ಕಚೇರಿಯ ಸಮೀಪದಲ್ಲಿರುವ ಅಂಚೆ ಕಚೇರಿ ಕಟ್ಟಡದ ಮೇಲೆ ಮರ ಉರುಳಿದ್ದು ಹತ್ತಿರದ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸರಕಾರಿ ರಜೆಯಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಅಲ್ಲದೆ ಈ ವೇಳೆ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದ್ದು ಬಿದ್ದ ಮರವು ಕಟ್ಟಡಕ್ಕೆ ವಾಲಿಕೊಂಡಿದೆ.
ಮರ ಉರುಳಿದ ಪ್ರದೇಶ ನಿತ್ಯ ಜನಜಂಗುಳಿಯಿಂದ ಕೂಡಿರುವುದಲ್ಲದೆ ಹಲವಾರು ವಾಹನಗಳನ್ನು ಅಲ್ಲಿ ನಿಲ್ಲಿಸಲಾ ಗುತ್ತಿತ್ತು. ಅಂಚೆ ಕಚೇರಿಗೂ ಬರುವ ಜನರ ಸಂಖ್ಯೆ ಅಧಿಕವಿರುತ್ತಿತ್ತು. ಅ.2ರಂದು ವಿಜಯದಶಮಿ ಹಾಗೂ ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸರಕಾರಿ ರಜೆ ಇದ್ದ ಹಿನ್ನೆಲೆ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ, ಪುರಸಭೆಯವರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.







