ಸ್ವಸಾಮರ್ಥ್ಯ, ಆತ್ಮವಿಶ್ವಾಸದಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯ: ಬಿಷಪ್ ಅ.ವಂ.ಡಾ.ಜೆರಾಲ್ಡ್ ಲೋಬೊ

ಕಾರ್ಕಳ, ಅ.2: ಯಾರಲ್ಲಿ ಕನಸು, ಛಲ, ಸ್ವಸಾಮರ್ಥ್ಯ, ಆತ್ಮ ವಿಶ್ವಾಸ ವಿರುತ್ತದೋ ಅವರು ಓರ್ವ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಗುರುವಾರ ಸಂಜೆ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಭವನದಲ್ಲಿ ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀ ಇದರ ವಾರ್ಷಿಕ ಸಹಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸ್ವಉದ್ಯಮಿಯಲ್ಲಿ ವಿಶೇಷವಾದ ಕಲೆ ಇದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸ್ವಉದ್ಯಮಕ್ಕೆ ಸೂಕ್ತವಾದ ಹಣಕಾಸು ನೆರವು ಲಭ್ಯವಿದ್ದು ಅದರ ಉಪಯೋಗವನ್ನು ಪಡೆದುಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು.
ಕೆಸಿಸಿಸಿಐ ಸಂಘಟನೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದು ಇದರೊಂದಿಗೆ ವರ್ಷ ಕ್ಕೊಮ್ಮೆ ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗ ಅರಸುವ ಯುವಕರಿಗೆ ಸಹಕಾರ ನೀಡಿದಂತಾ ಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಸ್ಐ ಕರ್ನಾಟಕ ದಕ್ಷಿಣ ಪ್ರಾಂತ ಸಭೆಯ ಧರ್ಮಾಧ್ಯಕ್ಷರಾದ ಅತಿ ವಂ.ಹೇಮಚಂದ್ರ ಕುಮಾರ್ ಮಾತನಾಡಿ, ಸಂಸ್ಥೆ ಹುಟ್ಟು ಹಾಕುವುದು ಸುಲಭ.ಅದನ್ನು ಯಶಸ್ವಿಯಾಗಿ ಮುನ್ನಡೆ ಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೆಸಿಸಿಸಿಐ ಯಶಸ್ವಿಯಾಗಿರುವುದು ಅಭಿನಂದನೀಯ ಸಂಗತಿ. ಉದ್ಯಮದಲ್ಲಿ ಬದ್ಧತೆ ಇದ್ದಾಗ ಯಶಸ್ಸು ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಫ್ರಾನ್ಸಿಸ್ ಡಿ’ಸೋಜಾ ಪಲಿಮಾರು ಇವರಿಗೆ ವರ್ಷದ ಉದ್ಯಮಿ, ಲವೀಟಾ ಅಂದ್ರಾದೆ ಉಡುಪಿ ಇವರಿಗೆ ಮಹಿಳಾ ಉದ್ಯಮಿ, ಅರುಣ್ ಸುಶೀಲ್ ಕೋಟ್ಯಾನ್ ಸುಭಾಷ್ ನಗರ ಇವರಿಗೆ ಯುವ ಉದ್ಯಮಿ ಹಾಗೂ ಡಾ. ಜೋಸೆಫ್ ಲೋಬೊ ಶಂಕರಪುರ ಇವರಿಗೆ ಪ್ರಗತಿ ಪರ ಕೃಷಿಕ ಪ್ರೇರಣಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು
ಡೊಲ್ಫಿ ಮಸ್ಕರೇನಸ್, ಲೂವಿಸ್ ಲೋಬೊ, ವಾಲ್ಟರ್ ಸಲ್ಡಾನಾ ಮತ್ತು ಜೆರಾಲ್ಡ್ ಫೆರ್ನಾಂಡಿಸ್ ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ಪ್ರಶಸ್ತಿ ವಿಜೇತರ ಪರವಾಗಿ ಫ್ರಾನ್ಸಿಸ್ ಡಿಸೋಜಾ ಮತ್ತು ಲವಿಟಾ ಅಂದ್ರಾದೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಂಘಟನೆ ಅಧ್ಯಕ್ಷ ಸಂತೋಷ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ವಂ. ಆಲ್ಬನ್ ಡಿಸೋಜಾ, ಸಂಘಟನೆಯ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ಮ್ಯಾಕ್ಷಿಮ್ ಸಲ್ಡಾನಾ ಉಪಸ್ಥಿತರಿದ್ದರು.
ಜಿತೇಂದ್ರ ಫುರ್ಟಾಡೊ ಸ್ವಾಗತಿಸಿ ಆಲ್ವಿನ್ ಕ್ವಾಡ್ರಸ್ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.







