ತೊಟ್ಟಂ: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನ

ಮಲ್ಪೆ, ಅ.3: ಗಾಂಧಿ ಜಯಂತಿ ಪ್ರಯುಕ್ತ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಕಥೊಲಿಕ್ ಸಭಾ, ಯುವ ಆಯೋಗ, ಮಹಿಳಾ ಆಯೋಗ ಮತ್ತು ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ವತಿಯಿಂದ ತೊಟ್ಟಂ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಚಾಲನೆ ನೀಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದ ತೊಟ್ಟಂ ವ್ಯಾಪ್ತಿಯ ಹಲವು ಪ್ರದೇಶಗಳು ಕಸಯುಕ್ತವಾಗಿ ಮಲಿನಗೊಂಡಿದೆ. ಇದರ ಕುರಿತು ಸಾರ್ವಜನಿಕರು ಮೌನ ವಾಗಿರದೆ ಜನಪ್ರತಿನಿಧಿಗಳನ್ನು ಎಚ್ಚರಿಸುವುದರೊಂದಿಗೆ ಪರಿಸರದ ಸ್ವಚ್ಚತೆ ಕಾಪಾಡುವಲ್ಲಿ ಮುಂಜಾಗೃತೆ ವಹಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ಹಗಲಿರುಳು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಮಲ್ಪೆ ಶಾಖೆಯ ಲೈನ್ಮ್ಯಾನ್ಗಳನ್ನು ಗುರುತಿಸಿ ಗೌರವಿಸಲಾಯಿತು. ತೊಟ್ಟಂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಚೇರಿ ಯಿಂದ ಆರಂಭಿಸಿ ಬಡಾನಿಡಿಯೂರು ಶಾಲೆಯ ತನಕ 5 ಗುಂಪುಗಳಾಗಿ ವಿಂಗಡಿಸಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ಕಸವನ್ನು ಸಂಗ್ರಹಿಸಿ ಸ್ವಚ್ಚಗೊಳಿಸಲಾಯಿತು.
ಈ ವೇಳೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಕಥೊಲಿಕ್ ಸಭಾ ಅಧ್ಯಕ್ಷ ವೀಣಾ ಫೆರ್ನಾಂಡಿಸ್, ಮಹಿಳಾ ಸಂಘಟನೆಯ ಅಧ್ಯಕ್ಷ ಪ್ರೀಯಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.







