ಕರ್ನಾಟಕ- ಗೋವಾ ನೇವಲ್ ಎನ್ಸಿಸಿ ಕೆಡೆಟ್ಗಳ ಸಾಗರ ನೌಕಾಯಾನ ದಂಡಯಾತ್ರೆ ‘ಮೆನು’ಗೆ ಹಸಿರು ನಿಶಾನೆ

ಉಡುಪಿ, ಅ.7: ‘ಯುವ ನಾವಿಕರು ಆದರೆ ಬಲಿಷ್ಠ ಸಮುದ್ರ ರಕ್ಷಕರು’ ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ ಮತ್ತು ಗೋವಾಗಳ 72 ಮಂದಿ ನೇವಲ್ ಎನ್ಸಿಸಿ ಕೆಡಟ್ಗಳ ಪ್ರತಿಷ್ಠಿತ ಸಾಗರ ನೌಕಾಯಾನ ದಂಡಯಾತ್ರೆ ಶಿಬಿರವನ್ನು ಕ್ಯಾಂಪ್ ಕಮಾಂಡೆಂಟ್, ಕಮಾಂಡರ್ ಅಶ್ವಿನ್ ಎಂ ರಾವ್ ಅವರು ಅಧಿಕೃತವಾಗಿ ಇಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಮೂರು ಬೋಟ್ಗಳಲ್ಲಿ ದಂಡಯಾತ್ರೆಗೆ ಹೊರಟ 72 ಮಂದಿ ಕೆಡೆಟ್ಗಳ ಸಮುದ್ರ ಯಾನಕ್ಕೆ ಹಸಿರು ನಿಶಾನೆ ತೋರಿಸಿ ಸುರಕ್ಷಿತ ಹಾಗೂ ಸಾಹಸಮಯ ಪ್ರಯಾಣಕ್ಕಾಗಿ ಶುಭ ಹಾರೈಸಿದರು.
ನೇವಲ್ ಕೆಡೆಟ್ಗಳ ಈ ತಂಡ ಅ.6ರಿಂದ ಅ.25ರವರೆಗೆ ನಡೆಯುವ ಸಮುದ್ರಯಾನದ ವೇಳೆ ಉಡುಪಿ-ಮಂಗಳೂರು -ಉಡುಪಿ ನಡುವೆ 219 ಕಿ.ಮೀ. ದೂರವನ್ನು ಪ್ರಕ್ಷುಬ್ಧ ಸಮುದ್ರದಲ್ಲಿ ಕ್ರಮಿಸಲಿದ್ದಾರೆ.
ಸಮುದ್ರಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕ್ಯಾಂಪ್ನ ಸಹಾಯಕ ಮುಖ್ಯಸ್ಥೆ ಸಿಡಿಆರ್ ಲಿಬಿನ್ ಜಾನ್ಸನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ, ಸಿಡಿಎಫ್ ನಿರ್ದೇಶಕ ಡಾ.ವಿಜಯೇಂದ್ರ ರಾವ್, ಉಡುಪಿಯ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ, ಮಾಜಿ ಸಿಆರ್ಪಿಎಫ್ ಕೇಶವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೆಡೆಟ್ಗಳಿಗೆ ಇಲ್ಲಿ ನಡೆದ ಶಿಬಿರದ ಕುರಿತು ಮಾಹಿತಿಯನ್ನು ನೀಡಿದ ಕಮಾಂಡರ್ ಅಶ್ವಿನ್ ಎಂ ರಾವ್, ಉಡುಪಿ ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯಲು ಕೆಡೆಟ್ಗಳಿಗೆ ಆಯೋಜಿಸಿದ್ದ ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ, ಚಾರಣ ಚಟುವಟಿಕೆಗಳು, ಬೀಚ್ ಸ್ವಚ್ಛತಾ ಚಟುವಟಿಕೆಗಳು, ವಿವಿಧ ಸ್ಥಳಗಳ ಶುಚಿಗೊಳಿಸುವಿಕೆ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ರ್ಯಾಲಿ, ಆರೋಗ್ಯ ಕುರಿತ ಕಾರ್ಯಾಗಾರಗಳ ಕುರಿತು ವಿವರಿಸಿದರು.
ಇದೀಗ ಕೈಗೊಂಡಿರುವ ಸಮುದ್ರ ದಂಡಯಾತ್ರೆಯು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದ್ದು, ಕರ್ನಾಟಕ ಮತ್ತು ಗೋವಾಗಳ ಎನ್ಸಿಸಿ ಕೆಡೆಟ್ಗಳು ದೇಶಾದ್ಯಂತದ 16 ಇತರ ಎನ್ಸಿಸಿ ನಿರ್ದೇಶನಾಲಯಗಳಿಂದ ಬರುವ ಕೆಡೆಟ್ಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ದಂಡಯಾತ್ರೆಯನ್ನು ಕೌಶಲ್ಯ, ಸಹಿಷ್ಣುತೆ ಮತ್ತು ತಂಡದ ಟೀಮ್ ವರ್ಕ್ಗಳ ಸಮಗ್ರ ಪರೀಕ್ಷೆಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಶ್ವಿನ್ ಎಂ.ರಾವ್ ವಿವರಿಸಿದರು.
ಈ ನೌಕಾಯಾನ ದಂಡಯಾತ್ರೆಗೆ ತೆರಳುವ ಮುನ್ನ ಕೆಡೆಟ್ಗಳು ಕಳೆದ ಅ.1ರಿಂದ 5ರವರೆಗೆ ‘ಮೆನು ಟ್ರೋಫಿ’ಗೆ ಪೂರ್ವಸಿದ್ಧತೆಯಲ್ಲಿ ಕಠಿಣ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದರು. ತರಬೇತಿಯ ಸಂದರ್ಭದಲ್ಲಿ ಕೆಡೆಟ್ಗಳಿಗೆ ದೋಣಿ ನಿರ್ವಹಣೆ, ನೌಕಾಯಾನ ರಿಗ್ಗಿಂಗ್ ಚಟುವಟಿಕೆಗಳು, ಸುರಕ್ಷತಾ ಕಾರ್ಯವಿಧಾನಗಳು ಮತ್ತು ಮುಂಬರುವ ಕಠಿಣ ಪ್ರಯಾಣಕ್ಕೆ ಅಗತ್ಯವಾದ ಸಲಕರಣೆ, ಬೋಟ್ನ್ನು ಮುನ್ನಡೆಸುವ ಬಗ್ಗೆ ಅಗತ್ಯ ತಾಂತ್ರಿಕ ಜ್ಞಾನದೊಂದಿಗೆ ಸಜ್ಜುಗೊಳಿಸಲಾಗಿದೆ.
ತಂಡದ ಸಾಗರ ನೌಕಾಯಾನವು ಉದ್ಯಾವರದ ಪ್ರಶಾಂತ ಪಾಪನಾಶಿನಿ ನದಿಯಿಂದ ಆರಂಭಗೊಂಡಿದ್ದು, ಅಲ್ಲಿಂದ ಕೆಡೆಟ್ಗಳು ಮಲ್ಪೆ ಬಂದರಿನ ಮೂಲಕ ತಮ್ಮ ಬೋಟುಗಳೊಂದಿಗೆ ತೆರೆದ ಅರಬಿಸಮುದ್ರವನ್ನು ಪ್ರವೇಶಿಸಿದರು. ನಂತರ ಅವರ ಪ್ರಯಾಣವು ಕರಾವಳಿಯ ತೀರದಲ್ಲಿ ದಕ್ಷಿಣಾಭಿಮುಖವಾಗಿ ಸಾಗಿದ್ದು, ಮೂಲ್ಕಿ, ಸಸಿಹಿತ್ಲು, ಸುರತ್ಕಲ್ ತೀರಗಳನ್ನು ಹಾದು ಅಂತಿಮವಾಗಿ ನವ ಮಂಗಳೂರು ಬಂದರಿನಲ್ಲಿ ಕೊನೆಗೊಳ್ಳುತ್ತದೆ.
ನೌಕಾಯಾನದ ಹಿಂದಿರುಗುವ ಹಂತದಲ್ಲಿಯೂ ಅದೇ ಮಾರ್ಗದಲ್ಲಿ ಸಾಗಿ ಬರಲಿದೆ. ಒಟ್ಟಾರೆಯಾಗಿ ಈ ತಂಡ ಸಮುದ್ರ ಮಾರ್ಗದಲ್ಲಿ 219 ಕಿ.ಮೀ. ದೂರವನ್ನು ಕ್ರಮಿಸಲು ಸಜ್ಜಾಗಿವೆ. ಇದು ಅವರ ಸಾಮರ್ಥ್ಯಕ್ಕೆ ನಿಜವಾದ ಸಾಕ್ಷಿಯಾಗಲಿದೆ.
ಈ ದಂಡಯಾತ್ರೆಗೆ 27 ಅಡಿ ಉದ್ದದ ಮೂರು ಡಿಕೆ ವೇಲರ್ ಕ್ಲಾಸ್ ಬೋಟ್ಗಳನ್ನು ಬಳಸಲಾಗಿದೆ. ಇದರೊಂದಿಗೆ ಸುರಕ್ಷತೆಗಾಗಿ ಸೇಫ್ಟಿ ಬೋಟ್ಗಳನ್ನು ಸಹ ಬಳಸಲಾಗುತ್ತಿದೆ. ಪ್ರತಿ ದೋಣಿಯನ್ನು ನಾಲ್ವರು ಹುಡುಗರು ಮತ್ತು ಇಬ್ಬರು ಹುಡುಗಿಯರನ್ನು ಒಳಗೊಂಡ ಆರು ಕೆಡೆಟ್ಗಳ ತಂಡ ನಿರ್ವಹಿಸುತ್ತದೆ.
ಈ ದಂಡಯಾತ್ರೆಯ ಪ್ರಾಥಮಿಕ ಉದ್ದೇಶ ಕೇವಲ ನೌಕಾಯಾನ ಮಾತ್ರವಲ್ಲ. ಅದು ನೌಕಾಯಾನದ ಕೌಶಲ್ಯ ವನ್ನು ಮೀರಿ ಕೆಡೆಟ್ಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸುವುದು, ಆತ್ಮ ವಿಶ್ವಾಸವನ್ನು ಪೋಷಿಸುವುದು, ತಂಡವಾಗಿ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿ ಸುವುದು. ಸಮುದ್ರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ತುಂಬುವ ಗುರಿಯನ್ನು ಹೊಂದಿದೆ. ಈ ದಂಡಯಾತ್ರೆ ಅ.15ರಂದು ಉಡುಪಿಯಲ್ಲಿ ಮುಕ್ತಾಯಗೊಳ್ಳಲಿದೆ.
ಈ ತರಬೇತಿ ಶಿಬಿರವು ಪ್ರತಿಷ್ಠಿತ ಅಖಿಲ ಭಾರತ ಸಮುದ್ರ ಯಾನ ದಂಡಯಾತ್ರೆ ‘ಮೆನು ಟ್ರೋಫಿ’ಗೆ ಪೂರ್ವ ಸಿದ್ಧತಾ ಕಣವಾಗಿದೆ ಎಂದು ಉಡುಪಿ ಎನ್ಸಿಸಿಯ ನಂ.6 ಕರ್ನಾಟಕ ನೇವಲ್ ಯುನಿಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.







