ಕುಂದಾಪುರ ಸಂಗಮ್ ಜಂಕ್ಷನ್ನಲ್ಲಿ ಮತ್ತೊಂದು ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾವ: ಸಂಸದ ಕೋಟ

ಕುಂದಾಪುರ: ಕುಂದಾಪುರ ಸಂಗಮ್ ಜಂಕ್ಷನ್ನಲ್ಲಿ ಮತ್ತೊಂದು ಫ್ಲೈಓವರ್ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ವಿವಿಧ ಸಮಸ್ಯೆಗಳನ್ನು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಆಲಿಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಸಂಗಮ್ನಲ್ಲಿ ಸುಗಮ ವಾಗಿ ವಾಹನಗಳ ಓಡಾಟಕ್ಕಾಗಿ ನೂತನ ಫ್ಲೈಓವರ್ ನಿರ್ಮಾಣ, ತಕ್ಷಣಕ್ಕೆ ಹೈಮಾಸ್ಟ್ ದೀಪ ಅಳವಡಿಕೆ, ಚರಂಡಿ ವ್ಯವಸ್ಥೆ ಸರಿಪಡಿಸುವುದು, ಪ್ರಾಧಿಕಾರ ದಾಖಲಿಸಿದ ಮೊಕದ್ದಮೆ ವಾಪಸು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದರು.
41 ಜನರಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಹಣ ಪಾವತಿಸ ಬೇಕಾಗಿದೆ. ಪುರಸಭೆ ವ್ಯಾಪ್ತಿ ಬದಲು ಆನಗಳ್ಳಿ ಗ್ರಾಮದ ಹಣ ನೀಡ ಬೇಕೆಂದು ಭೂಸ್ವಾಧೀನಾಧಿಕಾರಿ ಆದೇಶಿಸಿದ್ದನ್ನು ಪ್ರಶ್ನಿಸಿ ಡಿಸಿ ಕೋರ್ಟ್ನಲ್ಲ್ ಪ್ರಾಧಿಕಾರ ಮೇಲ್ಮನವಿ ಹಾಕಿತ್ತು. ಅಲ್ಲಿ ಸಾರ್ವಜನಿಕರ ಪರ ತೀರ್ಪು ಬಂದಿದೆ. 7 ಜನರ ಸಮಸ್ಯೆ ಇತ್ಯರ್ಥವಾಗಿದೆ. ಉಳಿದ ಪ್ರಕರಣಗಳನ್ನು ಪ್ರಾಧಿಕಾರ ಉಡುಪಿ ಕೋರ್ಟಿನಲ್ಲಿ ದಾಖಲಿಸಿದೆ. ಇದನ್ನು ಮರಳಿ ಪಡೆಯುವಂತೆ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರ ಬಳಿ ಮನವಿ ಮಾಡಲಾಗಿದೆ. ಕೇಸು ಮರಳಿ ಪಡೆದರೆ ಹಣ ಪಾವತಿಸಿ ಕಾಮಗಾರಿ ನಡೆಸಬಹುದು ಎಂದು ಪ್ರಾಧಿಕಾರದ ಹೊನ್ನಾವರ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಎಂ. ವಿವರಿಸಿದರು.
ಸಂಗಮ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಲು ಬೇರೆ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಯು ಟರ್ನ್ ಅನಿವಾರ್ಯ ಆಗಿದೆ. ಘನವಾಹನಗಳು ಬರುವಾಗ, ರಿಂಗ್ ರೋಡ್, ಚಿಕ್ಕನ್ ಸಾಲ್ ರೋಡ್, ಆನಗಳ್ಳಿ ರೋಡ್ ಸೇರಿ ಐದು ಕಡೆಗಳಿಂದ ವಾಹನಗಳು ಬರುವಾಗ ಇಲ್ಲಿ ಇಕ್ಕಟ್ಟು ಸಂಚಾರ ದಟ್ಟಣೆ ಸ್ವಾಭಾವಿಕವಾಗಿ ಇರುತ್ತದೆ. ಆದ್ದರಿಂದ ಇಲ್ಲಿ ಫ್ಲೈಓವರ್ ನಿರ್ಮಾಣದ ಅಗತ್ಯ ಇದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಜೇಶ್ ಕಡ್ಗಿಮನೆ, ಪುರಸಭೆ ಸದಸ್ಯ ಸಂತೋಷ್ ಶೆಟ್ಟಿ ಹೇಳಿದರು.
ಪುರಸಭೆ ವ್ಯಾಪ್ತಿಗೆ ಸ್ವಾಗತ, ನಿರ್ಗಮನ ವೇಳೆ ಶುಭವಿದಾಯ ಫಲಕ, ಎಪಿಎಂಸಿ ಬಳಿ ಚರಂಡಿ ದುರಸ್ತಿ ಸೇರಿದಂತೆ ವಿವಿಧ ಮನವಿಗಳನ್ನು ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು. ಇದಕ್ಕೆ ಕೂಡಾ ಪ್ರಾಧಿಕಾರದವರು ಒಪ್ಪಿದರು. ಭೂಸ್ವಾಧೀನ ಕೇಸು ವಾಪಸಾತಿ, ಫ್ಲೈಓವರ್ ನಿರ್ಮಾಣ ಕುರಿತು ಸಂಸದರು ಸ್ಥಳದಲ್ಲೇ ಪ್ರಾದೇಶಿಕ ನಿರ್ದೇಶಕರ ಜತೆ ದೂರವಾಣಿ ಮಾತುಕತೆ ನಡೆಸಿದರು.
ಸರ್ವಿಸ್ ರಸ್ತೆ, ಚರಂಡಿ, ಹೈಮಾಸ್ಟ್ ದೀಪ ಮೊದಲಾದವುಗಳನ್ನು ಆದ್ಯತೆ ಮೇರೆಗೆ ಮೊದಲಾಗಿ ಮಾಡಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ್ ಪೂಜಾರಿ, ಶ್ರೀಧರ ಶೇರೆಗಾರ್, ತಾ.ಪಂ. ಮಾಜಿ ಉಪಾಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಎಂಜಿನಿಯರ್ ಗುರುಪ್ರಸಾದ್, ಅರುಣ್ ಬಾಣ, ಸುರೇಂದ್ರ ಸಂಗಂ ಮೊದಲಾದವರು ಉಪಸ್ಥಿತರಿದ್ದರು.







