ಇಎಸ್ಐ ಅವ್ಯವಸ್ಥೆ: ಬಿಜೆಪಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಕಾರ್ಮಿಕರಿಗೆ ವೈದ್ಯಕೀಯ ನೆರವಿನ ಇ.ಎಸ್.ಐ ಯೋಜನೆ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ವಿಳಂಬ ನೀತಿಯನ್ನು ಖಂಡಿಸಿ, ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಜಿಲ್ಲಾಧಿಕಾರಿಗಳಿಗೆ ಮನ ಸಲ್ಲಿಸಿ, ಇಎಸ್ಐ ಸೌಲಭ್ಯಗಳನ್ನು ಸಮರ್ಪಕಗೊಳಿಸಲು ಆಗ್ರಹಿಸಿದೆ.
ರಾಜ್ಯ ಕಾರ್ಮಿಕ ಇಲಾಖೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಇ.ಎಸ್.ಐ ಯೋಜನೆ ಉಡುಪಿ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಒಪ್ಪಂದ ಮತ್ತು ನೊಂದಾವಣೆ ಮಾಡಿಕೊಳ್ಳದೇ ಇರುವುದರಿಂದ ಕಾರ್ಮಿಕರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ ಎಂದು ಅದು ಹೇಳಿದೆ.
ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕರು ಮತ್ತು ಸಂಸದರ ಮೂಲಕ ಒತ್ತಡ ತಂದ ಹಿನ್ನೆಲೆಯಲ್ಲಿ ಪ್ರಸ್ತುತ ನವೆಂಬರ್ 15ರವರೆಗೆ ಮಾತ್ರ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನವೆಂಬರ್ 15ರ ನಂತರ ಮತ್ತೆ ನೊಂದಣಿ ಸೌಲಭ್ಯ ಪಡೆಯಲು ರೋಗಿಗಳು ಪರದಾಡುವ ಸಾಧ್ಯತೆಯಿದೆ. ಹೀಗಾಗಿ ಮುಖ್ಯಮಂತ್ರಿಗಳು ಕಾರ್ಮಿಕ ಸಚಿವರಿಗೆ ಸೂಕ್ತ ನಿರ್ದೇಶನ ನೀಡಿ ಬಡ ಕಾರ್ಮಿಕರಿಗೆ ತೊಂದರೆ ನೀಡುವುದನ್ನು ನಿಲ್ಲಿಸಿ ಇಎಸ್ಐ ಸೌಲಭ್ಯವನ್ನು 3 ರಿಂದ 5 ವರ್ಷಗಳವರೆಗೆ ವಿಸ್ತರಿಸಲು ಭಾರತೀಯ ಜನತಾ ಪಕ್ಷದ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಸರಕಾರವನ್ನು ಒತ್ತಾಯಿಸಿದೆ.
ಪಕ್ಷದ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಬಾಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ಅಲೆವೂರು ಶ್ರೀಕಾಂತ್ ನಾಯಕ್, ಜ್ಯೋತಿ ಉದಯ್ ಕುಮಾರ್, ಸಂತೋಷ್ ಪೂಜಾರಿ ನೇರಳಕಟ್ಟೆ, ನಳಿನಿ ಪ್ರದೀಪ್, ಸಂಧ್ಯಾ ಮುಂತಾದವರು ಹಾಜರಿದ್ದರು.







