ಹಿರಿಯಡಕ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಹಿರಿಯಡ್ಕ, ನ.1: ಭಾಷೆ, ಬದುಕು, ಕಸುಬು, ಕಾಯಕ ಆರಾಧನೆ ಆಚರಣೆ ಎಲ್ಲವೂ ಆಗಿ ನಮ್ಮ ನಿತ್ಯದ ಬದುಕಿನ ಜೊತೆಗೆ ಬೆರೆತಿರುವ ನಾಡ ನುಡಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳುವ ಗಟ್ಟಿಯಾದ ಮನಸ್ಥಿತಿ ನಮ್ಮದಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕ ರಾಮಾಂಜಿ ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್., ಕನ್ನಡದ ಹೆಗಲ ಮೇಲೆ ಕುಳಿತು ಸವಾರಿ ನಡೆ ಸುವ ಭಾಷೆಗಳ ಕುರಿತು ಎಚ್ಚರ ವಹಿಸುವ ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಜತನವಾಗಿ ಕಾಪಾಡಿ ಕೊಳ್ಳಬೇಕಾದ ಹೊಣೆ ನಮ್ಮದು ಎಂದರು.
ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯಲತಾ ಪಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣ ಕೆ.ಯು. ವಂದಿಸಿದರು. ರಾ.ಸೇ.ಯೋ. ಮತ್ತು ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿ ನಾಯಕ ಈರಬಸು ಹಾಗೂ ಇತರ ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







