ಕ್ರಿಸ್ಮಸ್ ಕೇಕ್ ತಯಾರಿಕೆಗೆ ಮಿಕ್ಸಿಂಗ್ ಕಾರ್ಯಕ್ಕೆ ಚಾಲನೆ

ಉಡುಪಿ, ನ.1: ಕ್ರಿಸ್ಮಸ್ ಹಬ್ಬದ ಸಂಭ್ರಮ ಸಮೀಪಿಸುತ್ತಿದ್ದು ಈಗಾಗಲೇ ಎಲ್ಲೆಡೆ ತಯಾರಿ ಆರಂಭವಾಗಿದ್ದು ಉಡುಪಿಯ ರಂಜಿತಾ ಪ್ಯಾಲೇಸ್ ಹೋಟೆಲಿನಲ್ಲಿ ಶನಿವಾರ ಅದ್ದೂರಿಯಾದ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ಜರಗಿತು.
ಗಣ್ಯರು ಬಾಣಸಿಗ ಟೋಪಿಗಳು ಮತ್ತು ಅಪ್ರಾನಗಳನ್ನು ಧರಿಸಿ ಒಣದ್ರಾಕ್ಷಿ, ಸಕ್ಕರೆ ಪಾಕದಲ್ಲಿ ಹಾಕಿದ ಹಣ್ಣಿನ ಸಿಪ್ಪೆಗಳು, ಖರ್ಜೂರ, ಚೆರ್ರಿಗಳು ಮತ್ತು ಪರಿಮಳಯುಕ್ತ ಮಲಾಸೆಗಳಂತಹ ಪದಾರ್ಥಗಳನ್ನು ಮಿಶ್ರಣ ಮಾಡಿದರು. ಹಣ್ಣುಗಳು ಮತ್ತು ಬೀಜಗಳನ್ನು ಕಲಸಿ ನೆನಸಿ ಇಡಲಾಯಿತು. ರಾಶಿ ರಾಶಿ ಡ್ರೈ ಫ್ರುಟ್ಸ್ ಗುಡ್ಡೆ ಹಾಕಿ, ಅದರ ಮೇಲೆ ಲೀಟರ್ ಗಟ್ಟಲೆ ಆಲ್ಕೋಹಾಲ್ ಸುರಿದು ಕೇಕ್ ಮಿಕ್ಸಿಂಗ್ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಭಾಗವಹಿಸಿ ಕ್ರಿಸ್ಮಸ್ ಹಬ್ಬ ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿಯನ್ನು ಸಾರಿದೆ. ಈ ಹಬ್ಬ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಕೇಕ್ ಈ ಹಬ್ಬದ ಪ್ರಮುಖ ಖಾದ್ಯವಾಗಿದ್ದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವುದ ರೊಂದಿಗೆ ಕೇಕ್ ಸವಿಯನ್ನು ಸವಿಯುವುದು ವಾಡಿಕೆ. ಹಬ್ಬದ ಮೂಲಕ ಪರಸ್ಪರ ಪ್ರೀತಿ ಮತ್ತು ಸಹೋದರತೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಹೇಳಿದರು.
ಉಡುಪಿ ತನಿಷ್ಕ್ ಜ್ಯುವೆಲ್ಲರಿಯ ಮ್ಯಾಕ್ಷಿಮ್ ಸಲ್ಡಾನಾ, ದಾಯ್ಜಿವರ್ಲ್ಡ್ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್ ಜೊತೆಯಾಗಿ ಕೆಕ್ ಮಿಕ್ಸಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಹೋಟೆಲಿನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ನಾಯಕ್, ವ್ಯವಸ್ಥಾಪಕ ಮನೋಜ್ ಪೂಜಾರಿ, ಎಫ್.ಬಿ. ವ್ಯವಸ್ಥಾಪಕ ಪ್ರಮೋದ್ ಪೂಜಾರಿ, ಎಕ್ಸಿಕ್ಯೂಟಿವ್ ಶೆಫ್ ಶ್ರೀನಿವಾಸ್, ಹೊಟೇಲ್ ಚಿಕ್ಸ್ ಮಣಿಪಾಲ ಸಂಸ್ಥೆಯ ಡೊಲ್ಫಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.







