ಬೃಹತ್ ಗೀತೋತ್ಸವದ ಕಾರ್ಯಾಲಯ ಉದ್ಘಾಟನೆ

ಉಡುಪಿ, ನ.1: ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯ ಜಾಗತಿಕ ಯೋಜನೆ ಕೋಟಿ ಗೀತಾ ಲೇಖನ ಯಜ್ಞ ಮತ್ತು ಗೀತಾ ಜಯಂತಿಗಳ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಬೃಹತ್ ಗೀತೋತ್ಸವ ವಿಶಿಷ್ಟ ಕಾರ್ಯ ಕ್ರಮದ ಗೀತೋತ್ಸವ ಕಾರ್ಯಾಲಯವನ್ನು ರಾಜಾಂಗಣದ ಬಳಿ ಇಂದು ಆರಂಭಿಸಲಾಯಿತು.
ಕಾರ್ಯಾಲಯವನ್ನು ಪರ್ಯಾಯ ಪುತ್ತಿಗೆ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ರಾಜಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ತತ್ವವನ್ನೇ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನ.28ರಂದು ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನಕ್ಕೆ ಮಾಡಲಿದ್ದಾರೆ. ಇದೆಲ್ಲವೂ ಗೀತಾಚಾರ್ಯ ಶ್ರೀಕೃಷ್ಣನ ಸಂಕಲ್ಪವಾಗಿದೆ. ನೀವೆಲ್ಲರೂ ಈ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಸುಪ್ರಸಾದ ಶೆಟ್ಟಿ ಸಂಚಾಲಕತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ದಿವಾನರಾದ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮಾತನಾಡಿದರು. ಗೀತೋತ್ಸವದ ಮಾಹಿತಿಯನ್ನು ಪ್ರಮೋದ್ ಸಾಗರ್ ರವರೂತ್ ನೀಡಿದರು ರಮೇಶ ಭಟ್ ಸ್ವಾಗತಿಸಿದರು. ವಿಕ್ರಂ ಕುಂಟಾರ ವಂದಿಸಿದರು.





