ಆಟೋ ಎಲ್ಪಿಜಿ ದರ ಏರಿಕೆ ಖಂಡಿಸಿ ಧರಣಿ

ಉಡುಪಿ, ಮಾ.10: ಆಟೋ ರಿಕ್ಷಾಗಳಲ್ಲಿ ಬಳಸುವ ಎಲ್ಪಿಜಿ ಇಂಧನದ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಹಾಗೂ ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಲ್ಡಿಟಿಯು) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಧರಣಿ ನಡೆಸಲಾಯಿತು.
ಧರಣಿಯಲ್ಲಿ ಮಾತನಾಡಿದ ಎಸ್ಡಿಟಿಯು ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ, ಇತ್ತೀಚಿನ ದಿನಗಳಲ್ಲಿ ಆಟೋ ಎಲ್ಪಿಜಿ ದರವನ್ನು ಹೆಚ್ಚಿಸಿರುವುದು ಆಟೋ ಚಾಲಕರ ಬದುಕಿಗೆ ದೊಡ್ಡ ಹೊಡೆತವಾಗಿದ್ದು, ಬಹುತೇಕ ಆಟೋ ಚಾಲಕರು ದಿನನಿತ್ಯದ ಆದಾಯದ ಮೇಲೆ ಅವಲಂಬಿತರಾಗಿದೆ. ಇಂಧನದ ದರ ಏರಿಕೆಯಿಂದ ಕುಟುಂಬ ನಿರ್ವಹಣೆ, ವಾಹನದ ಬಾಡಿಗೆ, ಬ್ಯಾಂಕ್ ಸಾಲ ಹಾಗೂ ವಾಹನ ನಿರ್ವಹಣೆ ಮುಂತಾದ ಖರ್ಚುಗಳನ್ನು ಭರಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಸ್ಡಿಟಿಯು ರಾಜ್ಯ ನಾಯಕ ಶಾಹಿದ್ ಮಾತನಾಡಿದರು. ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಮಲ್ಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಫೀಕ್ ಪೊಲಿಪು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್ ಕಂಡ್ಲೂರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು ಇಸ್ಮಾಯಿಲ್ ಉಸ್ತಾದ್ ಸ್ವಾಗತಿಸಿ, ನಿರೂಪಿಸಿದರು.





