ಕೋಟೇಶ್ವರ | ಅನಧೀಕೃತ ರಿಕ್ಷಾ ನಿಲ್ದಾಣ ಎಂದು ಸೂಚನಾಫಲಕ ಅಳವಡಿಕೆಗೆ ಬಂದ ಪಿಡಿಓ ವಿರುದ್ಧ ನಾಗರಿಕರ ಅಸಮಾಧಾನ

ಕುಂದಾಪುರ: ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯ ಆರಂಭದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರಿಕ್ಷಾ ನಿಲ್ದಾಣ ಅನಧೀಕೃತ ಎಂದು ಈ ಬಗ್ಗೆ ಸೂಚನಾಫಲಕ ಅಳವಡಿಕೆ ಗೆಂದು ಬಂದ ಕೋಟೇಶ್ವರ ಪಿಡಿಒ ಮೇಲೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ನಾಗರಿಕರು ಅಸಮಾಧಾನ ವ್ಯಕ್ತಡಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಗ್ರಾ.ಪಂ. ಅಧಿಕಾರಿ ಸೂಚನಾಫಲಕ ಅಳವಡಿಕೆಗೆ ಬಂದಾಗ ರಿಕ್ಷಾ-ಚಾಲಕರು ಹಾಗೂ ಮಾಲಿಕರಿದ್ದು ತಕ್ಷಣ ಇವರ ನೆರವಿಗೆ ಸ್ಥಳೀಯ ಮುಖಂಡರುಗಳು ಆಗಮಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ದೇವಸ್ಥಾನದ ಜಾಗ ಒತ್ತುವರಿಯಾಗಿದ್ದರೂ ಕೂಡ ಅದನ್ನು ತೆರವು ಮಾಡುವ ಇಚ್ಚಾಶಕ್ತಿಯನ್ನು ಅಧಿಕಾರಿಗಳು ತೋರುತ್ತಿಲ್ಲ. ಪ್ರಸ್ತುತ ರಿಕ್ಷಾ ನಿಲ್ದಾಣದ ಕುರಿತು ನಾಮಫಲಕ ಅಳವಡಿಸಲು ಉದ್ದೇಶಿಸಿದ ಜಾಗವು ದೇವಸ್ಥಾನದ್ದಾಗಿದ್ದು ಇಲ್ಲಿ ಸೂಚನಾಫಲಕ ಅಳವಡಿಸುವುದು ಸರಿಯಲ್ಲ. ಈಗಾಗಾಲೇ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಲು ಹಲವು ಬಾರಿ ಮನವಿಯನ್ನು ದೇವಸ್ಥಾನದಿಂದ ನೀಡಿದ್ದೇವೆ ಎಂದರು.
ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ. ಆದರೆ ಜನರ ಎಲ್ಲಾ ಸುಖ-ದುಃಖಗಳಿಗೆ ಸ್ಪಂದಿಸುವ, ಸಾಮಾಜಿಕ ಕಳಕಳಿಯುಳ್ಳ ರಿಕ್ಷಾದವರ ಕಷ್ಟವನ್ನು ಮಾನವೀಯ ನೆಲೆಯಲ್ಲಿ ನೋಡಬೇಕು. ಹಲವು ದಶಕಗಳಿಂದ ಇಲ್ಲಿ ಆಟೋ ನಿಲ್ದಾಣವಿದೆ. ಇದೇ ಭಾಗದಲ್ಲಿ ದೇವಸ್ಥಾನ ಜಾಗ ಅತಿಕ್ರಮಣವಾದ ಬಗ್ಗೆ ಅಧಿಕಾರಿಗಳು ಕ್ರಮವಹಿಸಿಲ್ಲ. ಬಡ ರಿಕ್ಷಾದವರಿಗೆ ಸಮಸ್ಯೆ ಮಾಡುವುದು ಸರಿಯಲ್ಲ ಎಂದರು.
ಬೀಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ, ಗೋಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಮುಖರಾದ ನಾರಾಯಣ ಪೇಂಟರ್, ಗುಲಾಬಿಯಮ್ಮ, ಶೇಖರ್ ಮೊದಲಾದವರು ರಿಕ್ಷಾ ಚಾಲಕರ ಸಮಸ್ಯೆ ಕುರಿತು ಮಾತನಾಡಿದರು.
4-5 ದಶಕಗಳಿಂದ ಚೇತನಾ ಹೆಸರಿನ ರಿಕ್ಷಾ ನಿಲ್ದಾಣ ಇಲ್ಲಿದ್ದು 20ಕ್ಕೂ ಅಧಿಕ ರಿಕ್ಷಾಗಳಿದೆ. ನ್ಯಾಯಾಲಯದ ಆದೇಶವೆಂದು ನಮ್ಮನ್ನು ಎಬ್ಬಿಸಿದರೆ ನಮ್ಮ ಹೊಟ್ಟೆಪಾಡಿನ ಗತಿಯೇನು? ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಏನಿದು ಪ್ರಕರಣ?
ಕೋಟೇಶ್ವರ ಗ್ರಾಮದ ರಥಬೀದಿಯ ದಕ್ಷಿಣ ಭಾಗದಲ್ಲಿ ಆಟೋ ರಿಕ್ಷಾಗಳನ್ನು ನಿಲ್ಲಿಸುವುದರಿಂದ ತೊಂದರೆಯಾ ಗುತ್ತಿದೆ ಹಾಗಾಗಿ ಅದನ್ನ ತೆರವುಗೊಳಿಸಲು ಖಾಸಗಿ ವ್ಯಕ್ತಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಈ ಮನವಿಯನ್ನ ಪರಿಗಣಿಸುವಂತೆ ನ್ಯಾಯಾಲಯದಿಂದ ಆದೇಶವಾಗಿತ್ತು. ಪರಿಶೀಲಿಸಿದಾಗ ಈ ಸ್ಥಳ ಆಟೋ ಸ್ಟಾಂಡ್ ಅಥವಾ ಆಟೋ ನಿಲ್ದಾಣ ಸ್ಥಳವಾಗಿ ಅಧಿಕೃತವಾಗಿರುವುದು ಕಂಡುಬಂದಿದ್ದರಿಂದ ಯಾವುದೇ ಆಟೋಗಳನ್ನ ಇಲ್ಲಿ ನಿಲ್ಲಿಸದಿರಲು ನೋಟೀಸ್ ನೀಡಲಾಗಿತ್ತು. ಆದರೂ ಆ ಸ್ಥಳದಲ್ಲಿ ಆಟೊಗಳನ್ನು ನಿಲ್ಲಿಸಿ ಆಟೋ ಸ್ಟಾಂಡ್ ಎಂದು ಬಳಸುತ್ತಿದ್ದು ಪ್ರಸ್ತುತ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಕೆ ಮಾಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.







