ಪಠ್ಯೇತರ ಚಟುವಟಿಕೆಗಳಿಂದ ಉತ್ತಮ ಜೀವನ ರೂಪಿಸಲು ಸಾಧ್ಯ: ವಂ.ಫರ್ಡಿನಾಂಡ್ ಗೋನ್ಸಾಲ್ವಿಸ್

ಉಡುಪಿ, ಮೇ 8: ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸುವುದರೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಲ್ಯಾಣಪುರ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ವಾರ್ಷಿಕ ಕಾಲೇಜು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳಿಗೆ ಕಾಲೇಜು ಶೈಕ್ಷಣಿಕ ಅವಧಿ ತಮ್ಮ ಜೀವನದಲ್ಲಿ ಸಾಧನೆ ತೋರಲು ಇರುವ ಉತ್ತಮ ಅವಕಾಶವಾ ಗಿದ್ದು ಈ ಸಂದರ್ಭದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಸಿಕ್ಕ ವೇದಿಕೆಗಳನ್ನು ಉತ್ತಮವಾಗಿ ಬಳಸಿ ಕೊಳ್ಳಬೇಕು. ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳ ಕಾಲ ಹರಣ ಮಾಡದೆ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಳ್ಳುವಂತಾಗಬೇಕು. ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕಿ ಕವಿತಾ ಕೆ.ಆರ್. ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಪಠ್ಯ ವಿಷಯಗಳ ಜೊತೆಗೆ ಅವುಗಳಿಗಿಂತ ಭಿನ್ನವಾದ ಸಾಮಾಜಿ ಮೌಲ್ಯಗಳ ಅರಿವಿನ ಅಗತ್ಯವಿದ್ದು ಅದನ್ನು ಪರಿಚಯಿಸುವ ಕೆಲಸ ಮಿಲಾಗ್ರಿಸ್ ಕಾಲೇಜು ಅತ್ಯುತ್ತಮವಾಗಿ ಮಾಡುತ್ತಿದೆ ಎಂದರು.
ಭಾರತದ ಅಂಧ ಕ್ರಿಕೆಟ್ ಅಸೋಸಿಯೇಶನ್ ವ್ಯವಸ್ಥಾಪಕಿ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಶಿಕಾ ಶೆಟ್ಟಿ, ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ವಂ.ಮೆಲ್ವಿನ್ ಮೆಂಡೊನ್ಸಾ ಶುಭ ಹಾರೈಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವಾ ಮಂಡಿಸಿ ಕಾಲೇಜಿನ ಸಾಧಕ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಿದರು.
ಕಾಲೇಜಿನ ಸಂಚಾಲಕರಾಗಿ ಸೇವೆ ಸಲ್ಲಿಸಿ ಕೆಲವೇ ದಿನಗಳಲ್ಲಿ ವರ್ಗಾವಣೆ ಗೊಳ್ಳಲಿರುವ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರನ್ನು ಸನ್ಮಾನಿಸ ಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ವಿವಿಧ ದತ್ತಿ ನಿಧಿ ಪುರಸ್ಕಾರಗಳನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂಧ ಕಲಾವಿದರಿಗೆ ಕೊಡ ಮಾಡಿದ ರಿದಮ್ ಪ್ಯಾಡ್ ಉಪಕರಣವನ್ನು ಹಸ್ತಾಂತರಿಸಲಾಯಿತು.
ಉಪಪ್ರಾಂಶುಪಾಲರಾದ ಸೋಫಿಯಾ ಡಾಯಸ್, ಎಸ್ಡಬ್ಲ್ಯೂಸಿ ನಿರ್ದೇಶಕಿ ಸುಷ್ಮಾ ಶೆಟ್ಟಿ, ರಾಧಿಕಾ ಪಾಟ್ಕರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಮೇಸ್ತಾ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ್ ಸಾಲಿಯಾನ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲಾಯ್ನಲ್ ರೊವಿನ್ ಡಿಸಿಲ್ವಾ ಉಪಸ್ಥಿತರಿದ್ದರು.
ಶಾಲೆಟ್ ಮಥಾಯಸ್ ಸ್ವಾಗತಿಸಿ, ನಿಲೋರ್ಫ ರಿಯಾ ಫೆರ್ನಾಂಡಿಸ್ ವಂದಿಸಿದರು. ಜಿವಿತಾ ಮತ್ತು ಆನ್ಸನ್ ಕಾರ್ಯಕ್ರಮ ನಿರೂಪಿಸಿದರು.






